ಹಿಂದೂ ರಾಷ್ಟ್ರ ಸ್ಥಾಪನೆ ಕುರಿತ ಕಾರ್ಯಕ್ರಮಕ್ಕೆ ಸ್ಥಳಾವಕಾಶ: ಎಸ್ಡಿಎಂ ಕಾಲೇಜಿನ ನಿರ್ಧಾರಕ್ಕೆ ಸಿಎಫ್ಐ ಖಂಡನೆ
ಮಂಗಳೂರು, ಜು.19: ನಗರದ ಎಸ್ಡಿಎಂ ಲಾ ಕಾಲೇಜಿನಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಸ್ಥಾಪನೆ ಕುರಿತ ಚರ್ಚೆಯು ದೇಶದ ಸಂವಿಧಾನದ ಜಾತ್ಯತೀತ ಆಶಯದ ವಿರುದ್ಧವಾಗಿದೆ. ಇಂತಹ ಕಾರ್ಯ ಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಿದ ಎಸ್ಡಿಎಂ ಲಾ ಕಾಲೇಜಿನ ನಡೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ಖಂಡಿಸಿದೆ.
ಸನಾತನ ಸಂಸ್ಥೆಯು ದೇಶದಲ್ಲಿ ನಡೆದ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಹೆಸರಿಸಲ್ಪಟ್ಟ ಸಂಸ್ಥೆಯಾಗಿದೆ. ಗೌರಿಲಂಕೇಶ್, ಧಾಬೋಲ್ಕರ್ ರಂತಹ ಚಿಂತಕರು, ಹೋರಾಟಗಾರರನ್ನು ಕೊಲೆ ಮಾಡಿದ ಕೃತ್ಯಗಳಲ್ಲೂ ಕೂಡ ಇವರದೇ ಹೆಸರುಗಳಿರುವುದಾಗಿ ತನಿಖಾ ತಂಡಗಳು ವರದಿ ನೀಡಿದೆ. ಹೀಗಿರುವಾಗ ಎಸ್ಡಿಎಂ ಲಾ ಕಾಲೇಜು ಇಂತಹ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದ್ದು ದೇಶದ ಸಂವಿಧಾನಕ್ಕೆ ಎಸಗಿದ ದೊಡ್ಡ ಅಪರಾಧವಾಗಿದೆ.
ಇತ್ತೀಚೆಗೆ ಹಿಂದೂ ರಾಷ್ಟಸ್ಥಾಪನೆಯ ಭಾಗವಾಗಿ ಮುಸ್ಲಿಂ, ದಲಿತರ ಮೇಲೆ ದಬ್ಬಾಳಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿ ಗಳಿಗೆ ಜಾಗೃತಿ ಮೂಡಿಸಬೇಕಾದ ಶಿಕ್ಷಣ ಸಂಸ್ಥೆಗಳು ವಿಶೇಷವಾಗಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕಾದ ಕಾನೂನು ಶಿಕ್ಷಣ ಸಂಸ್ಥೆಯೇ ಆಯೋಜಿಸಿರುವುದು ಅಕ್ಷಮ್ಯ. ಹಾಗಾಗಿ ಈ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಬೇಕು ಮತ್ತು ಅಲ್ಲಿನ ಆಡಳಿತ ಮಂಡಳಿ, ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಜಿಲ್ಲಾಡಳಿತ ಸುತ್ತೋಲೆ ನೀಡಬೇಕು ಎಂದು ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಆಗ್ರಹಿಸಿದ್ದಾರೆ.