ಪಿಎಂ-ಕಿಸಾನ್ ಯೋಜನೆಯ ಮೊದಲ ಕಂತು 2.69 ಲಕ್ಷ ರೈತರಿಗೆ ಇನ್ನೂ ಸಿಕ್ಕಿಲ್ಲ !
ಹೊಸದಿಲ್ಲಿ, ಜು.19: 2.69 ಲಕ್ಷ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಮೊದಲ ಕಂತು ಇನ್ನೂ ಲಭಿಸಿಲ್ಲ. ಹಾಗಾಗಿ ರಾಜ್ಯ ಸರಕಾರಗಳು ಈ ರೈತರ ಬ್ಯಾಂಕ್ ವಿವರಗಳಲ್ಲಿ ಉಂಟಾಗಿರುವ ಲೋಪಗಳನ್ನು ಕೂಡಲೇ ಸರಿಪಡಿಸುವಂತೆ ತಿಳಿಸಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಈಗಾಗಲೇ ಬಹುತೇಕ ರಾಜ್ಯಗಳು ಈ ಯೋಜನೆಯನ್ನು ಅನುಷ್ಟಾನ ಮಾಡಿವೆ ಎಂದು ತಿಳಿಸಿದ ಕೃಷಿ ಸಹಾಯಕ ಸಚಿವ ಪರುಶೋತ್ತಮ್ ರುಪಾಲ, ಪಶ್ಚಿಮ ಬಂಗಾಳ ಮತ್ತು ದಿಲ್ಲಿ ಸರಕಾರವೂ ಈ ಯೋಜನೆಯನ್ನು ಜಾರಿಗೊಳಿಸುವಂತೆ ಮನವಿ ಮಾಡಿಕೊಂಡರು. ಕಳೆದ ಫೆಬ್ರವರಿಯಲ್ಲಿ ಜಾರಿಗೆ ತಂದ ಪಿಎಂ-ಕಿಸಾನ್ ಯೋಜನೆಯಡಿ 2 ಎಕರೆವರೆಗೆ ಜಮೀನು ಹೊಂದಿರುವ 14.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ ಒಟ್ಟು ಆರು ಸಾವಿರ ರೂ. ಜಮೆ ಮಾಡಲಾಗುತ್ತದೆ. ಈವರೆಗೆ 4.14 ಕೋಟಿ ರೈತರ ಖಾತೆಗೆ ಮೊದಲ ಕಂತಿನ ಮೊತ್ತ 2,000ರೂ.ವನ್ನು ಬಿಡುಗಡೆ ಮಾಡಲಾಗಿದೆ. ಇನ್ನು 3.17 ಕೋಟಿ ರೈತರು ಎರಡನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.
ಈ ಎರಡು ಕಂತುಗಳಲ್ಲಿ ಕ್ರಮವಾಗಿ ಒಟ್ಟು 8290.6 ಕೋಟಿ ರೂ. ಮತ್ತು 6355.8 ಕೋಟಿ ರೂ. ವರ್ಗಾಯಿಸಲಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.