ವಿಷ ಸೇವನೆ: ಮಗ ಸಾವು, ತಾಯಿ ಸ್ಥಿತಿ ಗಂಭೀರ
ಬೆಂಗಳೂರು, ಆ.9: ತಾಯಿ-ಮಗ ಜತೆಗೂಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ, ಮಗ ಮೃತಪಟ್ಟಿದ್ದು, ತಾಯಿ ಸ್ಥಿತಿ ಗಂಭೀರವಾಗಿರುವ ಘಟನೆ ಇಲ್ಲಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ತರಬನಹಳ್ಳಿ ನಿವಾಸಿಗಳಾದ ವರುಣ್(8) ಎಂಬಾತ ಮೃತಪಟ್ಟಿದ್ದು, ಇವರ ತಾಯಿ ಉಷಾಕುಮಾರಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭದ್ರತಾ ಸಿಬ್ಬಂದಿ ರೂಪೇಶ್ ಎಂಬುವವರನ್ನು 9 ವರ್ಷಗಳ ಹಿಂದೆ ವಿವಾಹವಾಗಿದ್ದ ಉಷಾಕುಮಾರಿಗೆ ವರುಣ್ ಒಬ್ಬನೇ ಮಗನಾಗಿದ್ದ. ಪತಿ ರೂಪೇಶ್, ಬೇರೆ ವ್ಯಕ್ತಿಗಳ ಬಳಿ ಸಾಲ ಮಾಡಿಕೊಂಡಿದ್ದು, ಸಾಲ ವಾಪಸ್ಸು ನೀಡದೆ, ಸಂಕಷ್ಟ ಎದುರಿಸುತ್ತಿದ್ದರು. ಇದರಿಂದ ನೊಂದು ಉಷಾಕುಮಾರಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಶಾಲೆಗೆ ಹೋಗಿ ಬಂದ ಮಗನಿಗೆ ನೀರಿನಲ್ಲಿ ಬೆರೆಸಿದ ವಿಷ ಕುಡಿಸಿ, ತಾನೂ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರೂ ಮನೆಯಲ್ಲಿರದೆ ಹತ್ತಿರದ ದೇವಾಲಯಕ್ಕೆ ಬಂದಿದ್ದು, ಅಸ್ವಸ್ಥಗೊಂಡು ಬಿದ್ದಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ, ಮಗ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.