ನೆರೆ ಸಂತ್ರಸ್ತರಿಗೆ 7 ಲಕ್ಷ ರೂ. ಸಂಗ್ರಹ: ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್
ಬಕ್ರೀದ್ ಹಬ್ಬ ಆಚರಣೆ
ಬೆಂಗಳೂರು, ಆ.12: ತ್ಯಾಗ ಬಲಿದಾನದ ಸಂಕೇತ ಬಕ್ರೀದ್ ಹಬ್ಬವನ್ನು ನಾಡಿದ್ಯಾಂತ ಆಚರಣೆ ಮಾಡುತ್ತಿದ್ದು, ಪ್ರವಾಹ ಪೀಡಿತ ಪ್ರದೇಶದ ಜನರಿಗಾಗಿ ಎಲ್ಲ ಈದ್ಗಾ ಮೈದಾನದಲ್ಲಿ ಹಣ ಸಂಗ್ರಹಿಸಲಾಗುತ್ತಿದ್ದು, ಇದುವರೆಗೂ 7 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಹೇಳಿದರು.
ಸೋಮವಾರ ಬಕ್ರೀದ್ ಹಬ್ಬದ ಹಿನ್ನಲೆ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ವರ್ಷ ವಿಜೃಂಭಣೆಯಿಂದ ಬಕ್ರೀದ್ ಆಚರಣೆ ಮಾಡಲಾಯಿತು. ಈ ಬಾರಿ, ಬಹಳ ಬೇಸರದಿಂದ ಆಚರಣೆ ಮಾಡಲಾಗುತ್ತಿದೆ.ಅಲ್ಲದೆ, ಬೆಳಗಾವಿಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಬೆಂಗಳೂರು ವ್ಯಾಪ್ತಿಯ ಈದ್ಗಾ ಮೈದಾನದಲ್ಲಿ ನಿಧಿ ಸಂಗ್ರಹ ಮಾಡುವಂತೆ ಸೂಚಿಸಲಾಗಿದೆ ಎಂದರು.
ಸಂಪುಟ ಇನ್ನೂ ಕೂಡಾ ರಚನೆಯಾಗಿಲ್ಲ. ಪ್ರವಾಹದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಯಾರೂ ಇಲ್ಲ. ಮಂತ್ರಿ ಮಂಡಲ ರಚನೆಯಾಗಿದ್ದರೆ ಜನರಿಗೆ ಉಪಯೋಗ ವಾಗುತ್ತಿತ್ತು. ಆದರೆ ಯಾವೊಬ್ಬ ಸಚಿವರಿಲ್ಲದೆ ಕೇವಲ ಸಿಎಂ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಝಮೀರ್ ನುಡಿದರು.