ಉತ್ತರಾಖಂಡ, ಜಮ್ಮು-ಕಾಶ್ಮೀರದಲ್ಲಿ ಭೂಕುಸಿತ: 9 ಮಂದಿ ಸಾವು
ಕೇರಳ ಪ್ರವಾಹದಲ್ಲಿ ಮೃತರ ಸಂಖ್ಯೆ 76ಕ್ಕೇರಿಕೆ
ಹೊಸದಿಲ್ಲಿ, ಆ.12: ಉತ್ತರಾಖಂಡ ಹಾಗೂ ಜಮ್ಮು-ಕಾಶ್ಮೀರದಲ್ಲಿ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಭೂ ಕುಸಿತ ಉಂಟಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದೆ. ಪ್ರವಾಹಪೀಡಿತ ನಾಲ್ಕು ರಾಜ್ಯಗಳಲ್ಲಿ ಮೃತಪಟ್ಟವರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಸೋಮವಾರ ಮೃತಪಟ್ಟವರ ಸಂಖ್ಯೆ 76ಕ್ಕೇರಿದೆ. ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆಗೆ 97 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಅಂಕಿ-ಅಂಶದಿಂದ ತಿಳಿದುಬಂದಿದೆ.
ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ನ ಕಛ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಸುಮಾರು 125 ಮಂದಿ ಸಿಲುಕಿಹಾಕಿಕೊಂಡಿದ್ದಾರೆ. ಅವರನ್ನು ಭಾರತೀಯ ವಾಯು ಪಡೆ ರಕ್ಷಿಸಿದೆ.
ಪರ್ವತ ರಾಜ್ಯ ಉತ್ತರಾಖಂಡದ ಚಾಮೊಲಿ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಭಾರೀ ಮಳೆಗೆ ಸಂಭವಿಸಿದ ಭೂಕುಸಿತಕ್ಕೆ ಓರ್ವ ಮಹಿಳೆ ಹಾಗೂ 9 ವರ್ಷದ ಹೆಣ್ಣು ಮಗು ಸಹಿತ 6 ಮಂದಿ ಜೀವಂತ ಸಮಾಧಿಯಾಗಿದ್ದಾರೆ.