ನಿರಾಶ್ರಿತರು ಭಯ ಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ: ಮುಖ್ಯಮಂತ್ರಿ ಯಡಿಯೂರಪ್ಪ
ಮೈಸೂರು, ಆ.12: ಮೈಸೂರು ಜಿಲ್ಲೆಯಲ್ಲಿ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರವಾಹ ನಿರಾಶ್ರಿತರು ಯಾವುದೇ ಭಯ ಪಡಬೇಡಿ. ನಿಮ್ಮ ಜೊತೆ ನಾವಿದ್ದೇವೆ, ಎಲ್ಲಾ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಮೈಸೂರು ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ ಅವರು ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರ ಕ್ಯಾಂಪ್ ಗಳಲ್ಲಿ ವಾಸವಿರುವವರಿಗೆ ತಕ್ಷಣ 10,000 ರೂ ನೀಡಲು ಸೂಚಿಸಿದ್ದೇನೆ ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ ನೀಡಲು ಮತ್ತು ಮನೆಗೆ ಹಾನಿಯಾಗಿದ್ದಲ್ಲಿ ರಿಪೇರಿಗಾಗಿ 1 ಲಕ್ಷ ರೂ ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಾಡಿಗೆ ಮನೆಯಲ್ಲಿ ಇರಲು ಬಯಸುವ ನಿರಾಶ್ರಿತರಿಗೆ ತಿಂಗಳಿಗೆ 5 ಸಾವಿರ ಬಾಡಿಗೆ ನೀಡಲಾಗುವುದು ಮತ್ತು ಪ್ರವಾಹದಲ್ಲಿ ಮೃತರಾದ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗುತ್ತದೆ ಹಾಗೂ ಕೃಷಿ ಜಮೀನು ಕಳೆದುಕೊಂಡ ರೈತರಿಗೆ ಸರ್ವೆ ಮಾಡಿ ನಂತರ ಪರಿಹಾರ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ ರಾಮದಾಸ್, ಬಿ.ಹರ್ಷವರ್ಧನ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.