ಬೆಳುವಾಯಿ: ಕಾರು ಢಿಕ್ಕಿ; ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ, ಓರ್ವಳ ಸ್ಥಿತಿ ಗಂಭೀರ
ಮೂಡುಬಿದಿರೆ, ಆ.13: ಅತೀ ವೇಗದಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಬೆಳುವಾಯಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ. ಗಾಯಾಳುಗಳ ಪೈಕಿ ಓರ್ವಳ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಮಂಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳುವಾಯಿ ಮೂಡಾಯಿಕ್ಕಾಡ್ ನಿವಾಸಿ ಜಗನ್ನಾಥ ಮಡಿವಾಳ ಎಂಬವರ ಪುತ್ರಿ ಶುಭಲಕ್ಷ್ಮೀ ಗಂಭೀರ ಗಾಯಗೊಂಡಿರುವವರು. ಇವರು ಉಡುಪಿ ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿ.
ಶುಭಲಕ್ಷ್ಮೀ ಸಹಿತ ನಾಲ್ವರು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳೆಲೆಂದು ಇಂದು ಬೆಳಗ್ಗೆ ಬೆಳವಾಯಿ ಸಮೀಪದ ಕಾಂತಾವರ ಕ್ರಾಸ್ ನಲ್ಲಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಮೂಡುಬಿದಿರೆ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಶುಭಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೂಡುಬಿದಿರೆ ಸಮೀಪದ ಸಂಪಿಗೆ ಎಂಬಲ್ಲಿನ ಇಬ್ಬರು ಸಂಚರಿಸುತ್ತಿದ್ದ ಕಾರು ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದ ಬಳಿಕ ಉರುಳಿಬಿದ್ದಿದೆ. ಅದರಲ್ಲಿದ್ದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.