ಬ್ರಹ್ಮಾವರ: ಮನೆ ಮೇಲೆ ಮರ ಬಿದ್ದು ಮಹಿಳೆಗೆ ಗಾಯ; 4 ಲಕ್ಷ ರೂ. ನಷ್ಟ
ಬ್ರಹ್ಮಾವರ, ಆ.13: ಭಾರೀ ಗಾಳಿ, ಮಳೆಯಿಂದ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಹಂದಾಡಿ ಗ್ರಾಮದ ಆಕಾಶವಾಣಿ ಸಮೀಪ ಇಂದು ಬೆಳಗ್ಗೆ ನಡೆದಿದೆ.
ಆಕಾಶವಾಣಿ ಸಮೀಪದ ನಿವಾಸಿ ವಿಶ್ವನಾಥ ಪೈ ಎಂಬವರ ಮನೆಯ ಮೇಲೆ ಬೃಹತ್ ಗೋಳಿಮರ ಬಿದಿದ್ದು, ಇದರಿಂದ ಮನೆ ಸಂಪೂರ್ಣ ನಾಶವಾಗಿದೆ. ಮನೆಯೊಳಗೆ ಇದ್ದ ಸುವರ್ಣ(65) ಹಾಗೂ ಅವರ ಪತಿ ಮಾಧವ ನಾಯಕ್ ಎಂಬವರ ಪೈಕಿ ಸುವರ್ಣ ಎಂಬವರ ತಲೆಗೆ ಗಾಯವಾಗಿದೆ.
ಗಾಯಗೊಂಡ ಮಹಿಳೆಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದ ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋಪಾಲಕೃಷ್ಣ ಗೋರಯ್ಯ ಆಗಮಿಸಿ ಪರಿಶೀಲನೆ ನಡೆಸಿದರು.