ವಿಮಾನ ಬೇಡ, ಜನರನ್ನು ಭೇಟಿಯಾಗಲು ಸ್ವಾತಂತ್ರ್ಯ ನೀಡಿ: ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ರಾಹುಲ್ ತಿರುಗೇಟು
ಹೊಸದಿಲ್ಲಿ, ಆ.13: ಕಾಶ್ಮೀರದಲ್ಲಿ ಹಿಂಸಾಚಾರ ಘಟನೆಗಳ ಕುರಿತಾದ ಕೆಲ ವರದಿಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, “ನಿಮಗೆ ವಿಮಾನ ಕಳುಹಿಸುತ್ತೇನೆ, ಇಲ್ಲಿಗೆ ಬಂದು ಪರಿಸ್ಥಿತಿ ಪರಿಶೀಲಿಸಿ ನಂತರ ಮಾತನಾಡಿ'' ಎಂದು ಹೇಳಿದ್ದರು. ಇದೀಗ ರಾಹುಲ್ ಮಲಿಕ್ ಅವರಿಗೆ ತಿರುಗೇಟು ನೀಡಿದ್ದಾರೆ.
“ಪ್ರೀತಿಯ ರಾಜ್ಯಪಾಲ ಮಲಿಕ್ ಅವರೇ, ನಾನು ಮತ್ತು ವಿಪಕ್ಷ ನಾಯಕರುಗಳ ನಿಯೋಗವು ಜಮ್ಮು ಕಾಶ್ಮೀರ ಮತ್ತು ಲಡಾಕ್ ಗೆ ಭೇಟಿ ನೀಡಲು ನೀವು ನೀಡಿದ್ದ ಆಹ್ವಾನವನ್ನು ಸ್ವೀಕರಿಸುತ್ತೇವೆ,'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
“ನಮಗೆ ವಿಮಾನ ಬೇಕಾಗಿಲ್ಲ. ಜನರನ್ನು ಭೇಟಿಯಾಗಲು ಮತ್ತು ಪ್ರವಾಸ ಕೈಗೊಳ್ಳಲು ಸ್ವಾತಂತ್ರ್ಯ ನೀಡಿ” ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.
ಕಾಶ್ಮೀರ ಕಣಿವೆಯ ಪರಿಸ್ಥಿತಿಯ ಕುರಿತಂತೆ ಬೇಜವಾಬ್ದಾರಿಯುತವಾಗಿ ರಾಹುಲ್ ಮಾತನಾಡುತ್ತಿದ್ದಾರೆಂದು ಈ ಹಿಂದೆ ಆರೋಪಿಸಿದ್ದ ಮಲಿಕ್, “ನೀವು ಜವಾಬ್ದಾರಿಯುತ ವ್ಯಕ್ತಿ, ನೀವು ಹೀಗೆ ಮಾತನಾಡಬಾರದು'' ಎಂದಿದ್ದರಲ್ಲದೆ “ನಾನು ರಾಹುಲ್ ಆವರಿಗೆ ಇಲ್ಲಿಗೆ ಬರಲು ಆಹ್ವಾನವಿತ್ತಿದ್ದೇನೆ'' ಎಂದೂ ಹೇಳಿಕೊಂಡಿದ್ದರು.