ಬಾಬರಿ ಮಸೀದಿ ನಿವೇಶನದಲ್ಲಿ ರಾಮಮಂದಿರ ಇತ್ತೇ ?: ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡನೆ
ಹೊಸದಿಲ್ಲಿ, ಆ. 13: ರಾಜಕೀಯವಾಗಿ ಅತಿ ಸೂಕ್ಷ್ಮವಾದ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಕುರಿತು ವಿಚಾರಣೆಯ ಐದನೇ ದಿನವಾದ ಮಂಗಳವಾರ ಸುಪ್ರೀಂ ಕೋರ್ಟ್ ಎದುರು ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ರಾಮಮಂದಿರ ಅಸ್ತಿತ್ವದಲ್ಲಿ ಇತ್ತೇ ಎಂಬ ಬಗ್ಗೆ ವಾದ ಮಂಡಿಸಲಾಯಿತು.
ಮಸೀದಿ ನಿರ್ಮಾಣವಾಗುವ ಮುನ್ನ ಅಲ್ಲಿ ರಾಮಮಂದಿರ ಅಸ್ತಿತ್ವದಲ್ಲಿ ಇತ್ತೇ ಎಂಬ ಬಗ್ಗೆ ರಾಮ ಲಲ್ಲಾ ವಿರಾಜ್ಮಾನ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಮುಂದೆ ವಾದ ಮಂಡಿಸಿದರು.
ವಿವಾದಿತ ನಿವೇಶನದಲ್ಲಿ ರಾಮಮಂದಿರ ಇತ್ತು ಎಂಬುದನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠ ಪ್ರತಿಪಾದಿಸಿತ್ತು ಎಂದು ವಿದ್ಯಾನಾಥನ್ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಹಾಗೂ ಎಸ್.ಎ. ನಝೀರ್ ಅವರನ್ನು ಕೂಡ ಒಳಗೊಂಡ ಪೀಠಕ್ಕೆ ತಿಳಿಸಿದರು. ದೇವಾಲಯವನ್ನು ನಾಶ ಮಾಡಿ ಮಸೀದಿ ನಿರ್ಮಿಸಲಾಯಿತು ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್.ಯು. ಖಾನ್ ಹೇಳಿದ್ದರು ಎಂದು ವೈದ್ಯನಾಥ್ ಪೀಠಕ್ಕೆ ತಿಳಿಸಿದರು.