ಕಳಸ: ಮನೆ ಮೇಲೆ ಭೂಕುಸಿದು ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಚಿಕ್ಕಮಗಳೂರು, ಆ.14: ಮಲೆನಾಡಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಚೆನ್ನಡ್ಲು ಗ್ರಾಮದಲ್ಲಿ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದ್ದ ಸಂತೋಷ್ ಪೂಜಾರಿ(41) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ.
ಕಳಸ ಹೋಬಳಿ ವ್ಯಾಪ್ತಿಯ ಮರಸಣಿಗೆ ಗ್ರಾಪಂ ವ್ಯಾಪ್ತಿಯ ಚೆನ್ನಡ್ಲು ಗ್ರಾಮದವರಾದ ಸಂತೋಷ್ ಪೂಜಾರಿ ಅವರು ಕಳೆದ ಆ.7ರಂದು ಮನೆಯಲ್ಲಿದ್ದ ವೇಳೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಸಂತೋಷ್ ಅವರ ಮನೆಯ ಮೇಲೆ ಧರೆ ಕುಸಿದಿತ್ತು. ಭೂಕುಸಿತದಿಂದಾಗಿ ಸಂತೋಷ್ ಸೇರಿದಂತೆ ಅವರ ವಾಸದ ಮನೆ ಸಂಪೂರ್ಣವಾಗಿ ನೆಲಸಮಗೊಂಡಿತ್ತು. ಮನೆಯ ಮೇಲೆ ಭಾರೀ ಮಣ್ಣು ಬಿದ್ದಿದ್ದರಿಂದ ಹಾಗೂ ಧಾರಾಕಾರ ಮಳೆಯಿಂದಾಗಿ ಅಂದು ಅವರನ್ನು ಮಣ್ಣಿನಿಂದ ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ.
ಭೂಕುಸಿತದಿಂದಾಗಿ ಚೆನ್ನಡ್ಲು ಗ್ರಾಮಕ್ಕೆ ಸಂಪರ್ಕ ಸಾಧಿಸುವ ರಸ್ತೆಗಳೂ ಕಡಿತಗೊಂಡಿದ್ದರಿಂದ ಸ್ಥಳಕ್ಕೆ ಹೋಗಲೂ ಸಾಧ್ಯವಾಗಿರಲಿಲ್ಲ. ಸಂತೋಷ್ ಬದುಕಿದ್ದಾರೋ, ಮೃತಪಟ್ಟಿದ್ದಾರೆಂಬುದೂ ತಿಳಿಯದಂತಾಗಿತ್ತು. ಸಂತೋಷ್ ಪತ್ತೆಗಾಗಿ ಎರಡು ಮೂರು ಬಾರಿ ಮಣ್ಣಿನಡಿ ಸಂಬಂಧಿಕರು, ಸ್ಥಳೀಯರು ಹುಡುಕಾಡಿದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಸ್ಥಳೀಯರು ಸಂತೋಷ್ ಅವರ ಮನೆ ಇದ್ದಲ್ಲಿ ಭಾರೀ ಪ್ರಮಾಣದಲ್ಲಿದ್ದ ಮಣ್ಣನ್ನು ತೆಗೆದು ಹುಡುಕಾಡಿದಾಗ ಸಂತೋಷ್ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಸಂತೋಷ್ ಅವರ ಮೃತದೇಹವನ್ನು ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ತರಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.