ಪ್ರವಾಹಕ್ಕೆ ತುತ್ತಾದ ಅಂಗನವಾಡಿ, ಶಾಲೆಗಳ ಶೀಘ್ರ ದುರಸ್ತಿಗಾಗಿ ಸರಕಾರಕ್ಕೆ ಸಮನ್ವಯ ವೇದಿಕೆ ಆಗ್ರಹ
ಬೆಂಗಳೂರು, ಆ.16: ಜಲಪ್ರವಾಹದಿಂದಾಗಿ ಸಂಪೂರ್ಣವಾಗಿ ನಾಶವಾಗಿರುವ ಅಂಗನವಾಡಿ ಹಾಗೂ ಶಾಲೆಗಳನ್ನು ಶೀಘ್ರವೇ ದುರಸ್ಥಿ ಮಾಡಬೇಕೆಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರಕಾರವನ್ನು ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ವೇದಿಕೆ, ಅಂಗನವಾಡಿ ಶಾಲೆ ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಕಟ್ಟಡ ಸಿದ್ಧವಾಗಿ ಶಾಲೆ-ಅಂಗನವಾಡಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವವರೆಗೆ ಪರ್ಯಾಯ ಸ್ಥಳದಲ್ಲಿ ಕೂಡಲೇ ಬಿಸಿಯೂಟ ಮತ್ತು ಮ್ಕಕಳ ಸ್ನೇಹಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಸಾಧ್ಯವಾದೆಲ್ಲೆಡೆ ಎಲ್ಲಾ ಮ್ಕಕಳಿಗೆ ಒಂದೇ ಸೂರಿನ ಅಡಿ ಊಟದ ವ್ಯವಸ್ಥೆ ಮತ್ತು ಮ್ಕಕಳ ಸ್ನೇಹಿ ಚಟುವಟಿಕೆಗಳನ್ನು ಕಲ್ಪಿಸಬೇಕೆಂದು ತಿಳಿಸಿದೆ.
ಪ್ರವಾಹದಿಂದ ಅಂಗನವಾಡಿ ಶಾಲೆಗಳಲ್ಲಿ ಸಂಭವಿಸಿರುವ ಹಾನಿಯನ್ನು ಅಂದಾಜು ಮಾಡಿ ಕೂಡಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಕಟ್ಟಡ, ಪುಸ್ತಕ, ಪೀಠೋಪಕರಣ ಮತ್ತು ಪಾಠೋಪಕರಣಗಳನ್ನು ತ್ವರಿತವಾಗಿ ಒದಗಿಸಲು ಜಿಲ್ಲಾ ಆಡಳಿತಕ್ಕೆ ನಿರ್ದೇಶನ ನೀಡಬೇಕು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಜೊತೆ ನಿಕಟ ಸಮನ್ವಯ ಸಾಧಿಸುವ ಮೂಲಕ ಹಾನಿಯ ವಿವರಗಳನ್ನು ಅಂದಾಜಿಸಿ ಕ್ರಮ ಕೈಗೊಳ್ಳಬೇಕು. ನೆರೆಹಾವಳಿಗೆ ಒಳಗಾದ ಮಕ್ಕಳ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯಸ್ತವನ್ನು ಆದ್ಯತೆಯ ಮೇಲೆ ಒದಗಿಸಿ ಆದಷ್ಟು ಶೀಘ್ರವಾಗಿ ಮಕ್ಕಳು ತಮ್ಮ ಕಟುಂಬಗಳ ಜೊತೆ ಸಾಮಾನ್ಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಒದಗಿಸಬೇಕು. ಪ್ರವಾಹದ ಭೀತಿಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ವಿಶೇಷ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ ಏರ್ಪಡಿಸಿ ಆಘಾತದಿಂದ ಚೇತರಿಸಿಕೊಳ್ಳಲು ಸಹಾಯ ಒದಗಿಸಬೇಕೆಂದು ವೇದಿಕೆಯ ಪರವಾಗಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.