ಬಿಎಸ್ವೈ ಮೋದಿಗೆ ಹೆದರುವುದಾದರೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ: ಸಿದ್ದರಾಮಯ್ಯ
"ಕಣ್ಣು-ಕಿವಿ ಇಲ್ಲದ ಸರಕಾರವನ್ನು ನಾನು ಎಂದೂ ನೋಡಿಲ್ಲ"
ಬೆಂಗಳೂರು, ಆ. 17: ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹೇರಿ ನೆರೆ ಸಂತ್ರಸ್ತರ ನೆರವಿಗೆ ಬಿಡಿಗಾಸು ತರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಈವರೆಗೂ 1ರೂ.ನೀಡಿಲ್ಲ. ಪ್ರಧಾನಿಗಳೆ ಸ್ವತಃ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಇಬ್ಬರು ಸಚಿವರನ್ನ ಕಳುಹಿಸಿದ್ದೇವೆ ಎಂದರು. ಆದರೆ, ಅವರೂ ಪರಿಹಾರ ಘೋಷಣೆ ಮಾಡಿಲ್ಲ. ಈವರೆಗೆ ಎಷ್ಟು ನಷ್ಟ ಆಗಿದೆ ಎಂಬ ವರದಿಯನ್ನೆ ತಯಾರಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರವಾಹ, ಬರಪೀಡಿತ ಪ್ರದೇಶಗಳಲ್ಲಿ ಸೋಮವಾರದಿಂದ ಪ್ರವಾಸ ಕೈಗೊಳ್ಳುತ್ತೇನೆ. ಕೇಂದ್ರ ಸರಕಾರ ಕೂಡಲೇ ರಾಜ್ಯಕ್ಕೆ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಪ್ರಧಾನಿ ಮೋದಿಯವರಿಗೆ ಹೆದರುತ್ತಾರೆಯೇ? ಸರ್ವಪಕ್ಷ ನಿಯೋಗ ಕೊಂಡೊಯ್ದಿದ್ದರೆ ನಾವಾದರೂ ಅವರ ಬಳಿ ಮಾತನಾಡುತ್ತಿದ್ದೆವು ಎಂದು ಹೇಳಿದರು.
ಪ್ರಧಾನಿ ಮೋದಿ ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ರಾಜ್ಯದಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಒಟ್ಟಾರೆ 1ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೆರವು ಘೋಷಿಸಬೇಕು ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ಸರಕಾರ ರಚನೆಯಾಗಿದೆ. ಈ ಸರಕಾರಕ್ಕೆ ಯಾವುದೇ ತತ್ವ-ಸಿದ್ಧಾಂತಗಳಿಲ್ಲ. ಕಣ್ಣು-ಕಿವಿ ಇಲ್ಲದ ಸರಕಾರವನ್ನು ನಾನು ಎಂದೂ ನೋಡಿಲ್ಲ. ಅಷ್ಟು ನಿರ್ಲಜ್ಜವಾದ ಸರಕಾರವಿದು. ಇವರಿಗೆ ಬದ್ಧತೆ ಇದ್ದರೆ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯಬೇಕು’
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ