ಪದ್ಮಶ್ರೀ ಪುರಸ್ಕೃತ ದಾಮೋದರ ಗಣೇಶ್ ಬಾಪಟ್ ನಿಧನ
ಹೊಸದಿಲ್ಲಿ, ಆ.17: ಸಾಮಾಜಿಕ ಕಾರ್ಯಕರ್ತ ಹಾಗೂ ಪದ್ಮಶ್ರೀ ಪುರಸ್ಕೃತ ದಾಮೋದರ್ ಗಣೇಶ್ ಬಾಪಟ್ (84 ವರ್ಷ) ಛತ್ತೀಸ್ಗಢದ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಛತ್ತೀಸ್ಗಢದ ಬುಡಕಟ್ಟು ಪ್ರದೇಶದಲ್ಲಿ ಸಮಾಜ ಸೇವಾ ಕಾರ್ಯ ನಡೆಸುತ್ತಿದ್ದ ಬಾಪಟ್, ಜಂಗೀರ್-ಚಂಪಾ ಜಿಲ್ಲೆಯಲ್ಲಿರುವ ಭಾರತೀಯ ಕುಷ್ಠ ನಿವಾರಕ ಸಂಘದ ಮೂಲಕ ಕುಷ್ಠ ರೋಗಿಗಳ ಆರೈಕೆ ಮತ್ತು ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಮಹಾರಾಷ್ಟ್ರದ ಅಮ್ರಾವತಿ ಜಿಲ್ಲೆಯಲ್ಲಿ ಜನಿಸಿದ್ದ ಬಾಪಟ್, ತಂದೆಯ ನಿಧನಾ ನಂತರ ಛತ್ತೀಸ್ಗಢದ ಜಶ್ಪುರದಲ್ಲಿ ನೆಲೆಸಿದ್ದರು. ಕುಷ್ಠ ರೋಗಿಗಳ ಆರೈಕೆಯಲ್ಲಿ ತೊಡಗಿದ್ದ ಡಾ. ಸದಾಶಿವ ಕತ್ರೆ ಅವರಿಂದ ಪ್ರೇರಿತರಾಗಿ ಕುಷ್ಠರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಅವರ ಕೋರಿಕೆಯಂತೆ ಮೃತದೇಹವನ್ನು ಬಿಲಾಸ್ಪುರದ ಛತ್ತೀಸ್ಗಢ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ಗೆ ದಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2018ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದ್ದರು.