ಸಿಜೆಐ ಗೊಗೊಯಿ ಹಾಜರಿದ್ದ ಘಟಿಕೋತ್ಸವಕ್ಕೆ ಗೈರಾದ ಕಾನೂನು ವಿವಿ ಟಾಪರ್
ಲೈಂಗಿಕ ಕಿರುಕುಳ ಪ್ರಕರಣ ನಿಭಾಯಿಸಿದ ರೀತಿಗೆ ವಿರೋಧ
ಹೊಸದಿಲ್ಲಿ, ಆ.19: ರಾಜಧಾನಿಯ ನ್ಯಾಷನಲ್ ಲಾ ಯುನಿವರ್ಸಿಟಿಯ ಎಲ್ಎಲ್ಎಂ ಕೋರ್ಸ್ ಟಾಪರ್ ಹಾಗೂ ಚಿನ್ನದ ಪದಕ ವಿಜೇತೆ ಸುರಭಿ ಕರ್ವಾ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಜರಿದ್ದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿಲ್ಲ. ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ನಿಭಾಯಿಸಿದ ರೀತಿಯನ್ನು ವಿರೋಧಿಸಿ ಟಾಪರ್ ಸುರಭಿ ಇಂತಹ ಒಂದು ಕ್ರಮ ಕೈಗೊಂಡಿದ್ದಾರೆ.
ಎಲ್ಲವೂ ನಿಗದಿಯಂತೆ ನಡೆದಿದ್ದರೆ ಆಕೆಗೆ ಚಿನ್ನದ ಪದಕವನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಮುಖ್ಯ ನ್ಯಾಯಮೂರ್ತಿಗಳೇ ನೀಡಬೇಕಿತ್ತು. ಘಟಿಕೋತ್ಸವದಲ್ಲಿ ಹಾಜರಿರದೇ ಇದ್ದರೂ ಸುರಭಿ ತಮ್ಮ ಪ್ರಶಸ್ತಿಯನ್ನು ನಿರಾಕರಿಸಿಲ್ಲ.
“ನಾನು ತರಗತಿಯಲ್ಲಿ ಕಲಿತ ವಿಚಾರಗಳನ್ನು ಪರಿಗಣಿಸಿದಾಗ ಸಿಜೆಐ ಗೊಗೊಯಿ ಅವರಿಂದಲೇ ಪ್ರಶಸ್ತಿಯನ್ನು ನಾನು ಸ್ವೀಕರಿಸಬೇಕೇ ಎಂಬ ವಿಚಾರದಲ್ಲಿ ಕಳೆದ ಕೆಲ ವಾರಗಳಿಂದ ಗೊಂದಲದಲ್ಲಿದ್ದೆ. ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದಾಗ ಅವರು ಮುಖ್ಯಸ್ಥರಾಗಿರುವ ಸಂಸ್ಥೆಯೇ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದೆ'' ಎಂದು ಸುರಭಿ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಮಾಜಿ ಉದ್ಯೋಗಿಯಾಗಿದ್ದ ಸಂತ್ರಸ್ತೆ ಆರೋಪ ಹೊರಿಸಿದ ನಂತರ ಆಕೆಯ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸುಪ್ರೀಂ ಕೋರ್ಟಿನ ಸೆಕ್ರಟರಿ ಜನರಲ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
ಎಪ್ರಿಲ್ 20ರಂದು ಅವಸರವಾಗಿ ನಡೆದ ವಿಚಾರಣೆಯಲ್ಲಿ ಗೊಗೊಯಿ ಮಾತನಾಡಿ, ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಹೇಳಿ ಪ್ರಕರಣದಿಂದ ಹಿಂದೆ ಸರಿದ್ದರು. ಸುಪ್ರೀಂ ಕೋರ್ಟಿನ ತನಿಖಾ ಸಮಿತಿ ನಂತರ ಮಹಿಳೆಯ ಆರೋಪದಲ್ಲಿ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬಂದಿತ್ತು.