ದೋಹಾ: ಕನ್ನಡ ಪರ ಸಂಘಟನೆಗಳಿಂದ ಸ್ಯಾಂಡಲ್ವುಡ್ ಕಲಾವಿದರಿಗೆ ಸನ್ಮಾನ
ಕತರ್, ಆ.20: ದೋಹಾದಲ್ಲಿ ಇತ್ತೀಚೆಗೆ ನಡೆದ 8ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಿಸಲು ಆಗಮಿಸಿದ್ದ ಸ್ಯಾಂಡಲ್ವುಡ್ನ ಹಲವು ನಟ-ನಟಿಯರನ್ನು ಇದೇ ಸಂದರ್ಭ ಕರ್ನಾಟಕ ಮೂಲಕ ಸಂಘಸಂಸ್ಥೆಗಳು, ಕರ್ನಾಟಕ ಸಂಘ ಕತರ್ ಇವುಗಳ ವತಿಯಿಂದ ಸನ್ಮಾನಿಸಲಾಯಿತು.
ಕೆ.ಜಿ.ಎಫ್. ಚಿತ್ರದ ನಟನೆಗಾಗಿ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಜನಟ, ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಂಘದ ಉಪಾಧ್ಯಕ್ಷ ಎಂ.ರವಿ ಶೆಟ್ಟಿ ಶಾಲು ಹೊದಿಸಿ ಸನ್ಮಾನಿಸಿದರು. ಅಯೋಗ್ಯ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ರಚಿತಾರಾಮ್ ಅವರನ್ನು ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ಮಧು ಅಭಿನಂದಿಸಿ ಸನ್ಮಾನಿಸಿದರು.
ನಟ ಪ್ರಜ್ವಲ್ ದೇವರಾಜ್ ರನ್ನು ಸಂಘದ ಪದಾಧಿಕಾರಿ ದಿನೇಶ್ ಗೌಡ ಮತ್ತು ಸಂಘದ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಆತ್ಮೀಯವಾಗಿ ಸನ್ಮಾನಿಸಿದರು. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ ಅಚ್ಯುತ ಕುಮಾರ್ ಮತ್ತು ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ತುಮಿನಾಡ್ ಅವರನ್ನು ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು ಒಟ್ಟಾಗಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶ್, ಕತರ್ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿ ಅತಿ ಶೀಘ್ರದಲ್ಲಿ ಮತ್ತೆ ಭೇಟಿ ನೀಡಿ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಇರಾದೆ ವ್ಯಕ್ತಪಡಿಸಿದರು.
ಎಸ್ .ಕೆ.ಎಂ.ಡಬ್ಲು ಎ. ಅಧ್ಯಕ್ಷ ಅಬ್ದುಲ್ ಮಜೀದ್, ಮಂಗಳೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸುನೀಲ್ ಡಿಸಿಲ್ವ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಅರುಣ್ ಕುಮಾರ್ , ತುಳುಕೂಟ ಕತರ್ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷ ಕಿರಣ್ ಆನಂದ್, ಕಾರ್ಯಕಾರಿ ಸಮಿತಿಯ ಸದಸ್ಯ ಸಾಗರ್ ಕೋಟ್ಯಾನ್ ಹಾಗೂ ಈ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಬೆಂಬಲ ನೀಡಿದ ಸಮುದಾಯ ಕಾರ್ಯಕರ್ತ ಜೆರಾಲ್ಡ್ ಡಿಸೋಜ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಸಂಘದ ಮಹಿಳಾ ಮತ್ತು ಮಕ್ಕಳ ವಿಭಾಗದ ಕಾರ್ಯದರ್ಶಿ ಆಶಾ ನಂಜಪ್ಪ ವಂದಿಸಿದರು