ಪ್ರಾಮಾಣಿಕರಿಗೆ ಅವಕಾಶ ನೀಡದೆ ಕಡೆಗಣಿಸಲಾಗಿದೆ: ಸಚಿವ ಸ್ಥಾನ ತಪ್ಪಿದ್ದಕ್ಕೆ ಅಪ್ಪಚ್ಚು ರಂಜನ್ ಆಕ್ರೋಶ
ಮಡಿಕೇರಿ, ಆ.20 : ಕೊನೆಗೂ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಯಾಗಿದ್ದು, ಸಚಿವ ಸ್ಥಾನದಿಂದ ವಂಚಿತರಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 22 ವರ್ಷಗಳಿಂದ ವಿಧಾನಸಭೆಯನ್ನು ಪ್ರವೇಶಿಸಿರುವ ನನ್ನ ಹಿರಿತನವನ್ನು ಮುಖ್ಯಮಂತ್ರಿಗಳು ಯಾಕೆ ಕಡೆಗಣಿಸಿದರೋ ಗೊತ್ತಿಲ್ಲ. ಕೊಡಗಿನ ಕೊಡವ ಸಮುದಾಯದ ಏಕೈಕ ಶಾಸಕ ನಾನಾಗಿದ್ದು, ನನಗೆ ಸಚಿವ ಸ್ಥಾನ ನೀಡಬೇಕಾಗಿತ್ತು ಎಂದು ಅಪಸ್ವರ ಎತ್ತಿದ್ದಾರೆ. ಶೇ.95 ರಷ್ಟು ಕೊಡವರು ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಕೊಡಗಿಗೆ ಮೂರು ಸಚಿವ ಸ್ಥಾನವನ್ನು ನೀಡಿದ್ದರು. ಆದರೆ ಬಿಜೆಪಿ ಬಲವಾಗಿರುವ ಇಂಥ ಸಂದರ್ಭದಲ್ಲೂ ನನಗೆ ಸಚಿವ ಸ್ಥಾನ ನೀಡದೆ ಇರುವುದು ಬೇಸರ ತಂದಿದೆ ಎಂದು ಮಾಧ್ಯಮಗಳೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ.
ನಾನು ವ್ಯಕ್ತಿ ನಿಷ್ಠನಲ್ಲ, ಬದಲಿಗೆ ಪಕ್ಷ ನಿಷ್ಠ, ಪಕ್ಷದ ಬೆಳವಣಿಗೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ, ಪ್ರಾಮಾಣಿಕರಿಗೆ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಮುಖ್ಯಮಂತ್ರಿಗಳು ನನ್ನನ್ನು ನಿರ್ಲಕ್ಷಿಸಿದ್ದಾರೆ, ಈಗ ಸಮಾಧಾನ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಅಸಮಾಧಾನವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಮುಂದಿನ ನಿರ್ಧಾರದ ಬಗ್ಗೆ ಕಾದು ನೋಡಿ ಎಂದು ಅಪ್ಪಚ್ಚು ರಂಜನ್ ಹೇಳಿದರು.
ಕೊಡಗು ಜಿಲ್ಲೆಗೆ ಲೋಕಸಭಾ ಸ್ಥಾನವೂ ಇಲ್ಲ, ಮಂತ್ರಿ ಪದವಿಯೂ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ನಾನೆಂದೂ ಪಕ್ಷದಲ್ಲಿ ಅಧಿಕಾರಕ್ಕಾಗಿ ಜಗಳ ಮಾಡಿದವನಲ್ಲ, ಆದರೆ ಈ ಬಾರಿ ತುಂಬಾ ಬೇಸರವಾಗಿರುವ ಕಾರಣ ಮಾತನಾಡಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.