ಮಾಜಿ ವಿತ್ತ ಸಚಿವ ಚಿದಂಬರಂ ಮನೆಗೆ ನೊಟೀಸ್ ಹಚ್ಚಿದ ಸಿಬಿಐ
ಹೊಸದಿಲ್ಲಿ, ಆ.21: ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಬಂಧನ ಭೀತಿಯಿಂದ ರಕ್ಷಿಸುವಂತೆ ಕೋರಿಕೊಂಡ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬಳಿಕ ಸಿಬಿಐ ತಂಡ 24 ಗಂಟೆಗಳಲ್ಲಿ ಎರಡನೇ ಬಾರಿ ಬುಧವಾರ ಬೆಳಗ್ಗೆ ಚಿದಂಬರಂ ಅವರ ದಿಲ್ಲಿಯ ನಿವಾಸಕ್ಕೆ ಭೇಟಿ ನೀಡಿದೆ. ಚಿದಂಬರಂ ಮನೆಯಲ್ಲಿ ಇಲ್ಲವೆಂದು ಖಾತ್ರಿಯಾದ ಬಳಿಕ ವಾಪಸ್ ತೆರಳಿದೆ.
ಮಂಗಳವಾರ ಸಂಜೆ 6:30ಕ್ಕೆ ಚಿದಂಬರಂ ನಿವಾಸಕ್ಕೆ ಧಾವಿಸಿದ್ದ ಆರು ಅಧಿಕಾರಿಗಳಿದ್ದ ಸಿಬಿಐ ತಂಡ ಮನೆಯ ಹೊರಗೆ ನೋಟಿಸ್ ಹಚ್ಚಿ, ಎರಡು ಗಂಟೆಯೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಸಿಬಿಐ ತಂಡ ನಿರ್ಗಮಿಸಿದ ಕೆಲವೇ ಗಂಟೆಗಳ ಬಳಿಕ ಜಾರಿ ನಿರ್ದೇಶನಾಲಯದ ತಂಡ ಕೂಡ ಚಿದಂಬರಂ ಮನೆಗೆ ಭೇಟಿ ಕೊಟ್ಟಿದೆ.
ಚಿದಂಬರಂ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಅವಧಿಯಲ್ಲಿ ಚಿದಂಬರಂ ಮೀಡಿಯಾ ಕಂಪೆನಿಗೆ ವಿದೇಶಿ ಬಂಡವಾಳ ಹರಿದುಬರಲು ವ್ಯವಸ್ಥೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ಚಿದಂಬರಂ ಪುತ್ರ ಕಾರ್ತಿ, ಕಿಕ್ ಬ್ಯಾಕ್ ಪಡೆದ ಆರೋಪವಿದೆ.
ಮಂಗಳವಾರ ದಿಲ್ಲಿ ಹೈಕೋರ್ಟ್, ನಿರೀಕ್ಷಿತ ಜಾಮೀನಿಗೆ ಆಗ್ರಹಿಸಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.