ಮಸ್ಕತ್ : ಸೋಶಿಯಲ್ ಫೋರಮ್ ನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ
ಮಸ್ಕತ್ : ಸೋಶಿಯಲ್ ಫೋರಮ್ ಒಮಾನ್ ವತಿಯಿಂದ ಇಲ್ಲಿನ ಪಾರ್ಕ್ ವೇ ಹೊಟೇಲ್ ಸಭಾಂಗಣದಲ್ಲಿ ಭಾರತೀಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಸ್ಕತ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಒಂದುಗೂಡಿ ಸ್ವಾತಂತ್ರ್ಯ ದಿನವನ್ನು ಸ್ಮರಿಸುವ ಸಲುವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಭಾರತೀಯರು ಆಗಮಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರಿದರು.
ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿದ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಸದಸ್ಯ ಫಯಾಝ್ ಎನ್. ಮಾತನಾಡಿ, ಸಂವಿಧಾನವು ಪ್ರತಿಪಾದಿಸಿರುವ ಸ್ವಾತಂತ್ರ್ಯ ಮತ್ತು ಈಗ ಜಾರಿಯಲ್ಲಿರುವ ಸ್ವಾತಂತ್ರ್ಯಕ್ಕೂ ವೈರುಧ್ಯವಿದೆ. ವಾಸ್ತವದಲ್ಲಿ ನಾವು ಅನುಭವಿಸಬೇಕಾಗಿರುವ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅರಿತಿರಬೇಕು. ಇಲ್ಲವೆಂದಲ್ಲಿ ಗುಲಾಮಿತನವನ್ನೇ ಸ್ವಾತಂತ್ರ್ಯ ಎಂದು ಭ್ರಮಿಸುವ ಅಪಾಯವಿದೆ. ಆ ರೀತಿಯ ಭ್ರಯೋತ್ಪಾದನೆಯಲ್ಲಿ ಈಗಿನ ಆಡಳಿತ ವ್ಯವಸ್ಥೆಯು ಸಾಕಷ್ಟು ಪರಿಣತಿ ಹೊಂದಿದೆ. ಭಯಮುಕ್ತ ಸ್ವಾತಂತ್ರ್ಯವು ಜನಸಾಮಾನ್ಯರ ಇಂದಿನ ಬೇಡಿಕೆಯಾಗಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಇಂಟರ್ ನ್ಯಾಶನಲ್ ಮಿಷನ್ ನ ಪ್ರತಿನಿಧಿ ಪ್ರಕಾಶ್ ಪಂಡಿತ್, ಮೌಲಾನ ಖಮರ್ ಜಲಾಲ್ ಬಿಹಾರ್ ಮುಂತಾದವರು ಉಪಸ್ಥಿತರಿದ್ದರು.
ಸೋಶಿಯಲ್ ಫೋರಮ್ ಮಸ್ಕತ್ ಸಮಿತಿಯ ಕಾರ್ಯದರ್ಶಿ ರಿಯಾಝ್ ಗಂಗೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಅನೀಸ್ ಕಾರ್ಯಕ್ರಮ ನಿರೂಪಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಭಿಕರಿಗೆ ಹಮ್ಮಿಕೊಳ್ಳಲಾದ ರಸಪ್ರಶ್ನೆ ಕಾರ್ಯಕ್ರಮವನ್ನು ಆಸಿಫ್ ಪಡುಬಿದ್ರೆ ನೆರವೇರಿಸಿದರು.