ಯಾರೂ ಓಡಿ ಹೋಗುತ್ತಿಲ್ಲ, ಎಲ್ಲರೂ ವಿಚಾರಣೆಗೆ ಕಾಯುತ್ತಿದ್ದಾರೆ: ಪಿ.ಚಿದಂಬರಂ
ಹೊಸದಿಲ್ಲಿ, ಆ.21: ಐಎನ್ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಹಣ ವಂಚನೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಬುಧವಾರ ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಕರಣದ ಬಗ್ಗೆ ತನ್ನ ವಿವರಣೆಯನ್ನು ನೀಡಿದರು. “ನನಗೆ ಸ್ವಾತಂತ್ರ್ಯ ಮತ್ತು ಬದುಕಿನ ಮಧ್ಯೆ ಆಯ್ಕೆಯನ್ನು ನೀಡಿದರೆ ನಾನು ಸ್ವಾತಂತ್ರವನ್ನು ಆಯ್ಕೆ ಮಾಡುತ್ತೇನೆ” ಎಂದು ಚಿದಂಬರಮ್ ಈ ವೇಳೆ ತಿಳಿಸಿದರು. “ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ತಳಹದಿ. ಇಲ್ಲಿ ಯಾರೂ ಓಡಿ ಹೋಗುತ್ತಿಲ್ಲ, ಎಲ್ಲರೂ ವಿಚಾರಣೆಯನ್ನು ಬಯಸಿದ್ದಾರೆ” ಎಂದು ಪ್ರಕರಣದ ಕುರಿತು ಅವರು ಉಲ್ಲೇಖಿಸಿದರು. “ನಾನು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ಸುದ್ದಿ ಕೇಳಿ ಆಘಾತಗೊಂಡೆ. ಕಳೆದ ರಾತ್ರಿ ನಾನು ನನ್ನ ವಕೀಲರ ಜೊತೆಗಿದ್ದೆ ಹಾಗೂ ದಿನವಿಡೀ ಪ್ರಕರಣದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದೆ” ಎಂದು ಮಾಜಿ ವಿತ್ತ ಸಚಿವ ವಿವರಿಸಿದರು.
ಕಾನೂನಿಗೆ ಗೌರವ ನೀಡುವುದು ಎನ್ನುವುದರ ಒಂದೇ ಅರ್ಥವೆಂದರೆ ಶುಕ್ರವಾರ ಹೊರಬೀಳಲಿರುವ ಸರ್ವೋಚ್ಚ ನ್ಯಾಯಾಲಯದ ಆದೇಶ ಬರುವವರೆಗೆ ಕಾಯುವುದು. ಅಂದು ಸ್ವಾತಂತ್ರದ ದೀಪ ಪ್ರಕಾಶಮಾನವಾಗಿ ಉರಿಯಲಿದೆ ಎಂಬ ವಿಶ್ವಾಸವನ್ನು ಇರಿಸೋಣ ಎಂದು ಚಿದಂಬರಂ ತಿಳಿಸಿದರು.