ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತರ ಕಾರಾಗೃಹ ಬದಲಾವಣೆ ಸಾಧ್ಯತೆ
ಬೆಂಗಳೂರು, ಆ.22: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲ ಆರೋಪಿಗಳನ್ನು ಇತರೆ ಕಾರಾಗೃಹಗಳಿಗೆ ಕಳುಹಿಸಲು ರಾಜ್ಯ ಕಾರಾಗೃಹ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.
ಬಂಧಿತ ಆರೋಪಿಗಳು ಒಂದೇ ಕಡೆ ಜಮಾಯಿಸಿದರೆ, ಸಾಕ್ಷ ನಾಶ ಸಾಧ್ಯತೆ ಹೆಚ್ಚಾಗಿದ್ದು, ಹತ್ಯೆಯ ಪ್ರಮುಖ ರೂವಾರಿ ಅಮೋಲ್ ಕಾಳೆ ಅನ್ನು ಮೈಸೂರು ಕಾರಾಗೃಹಕ್ಕೆ, ಪರಶುರಾಮ್ ವಾಗ್ಮೋರೆಯನ್ನು ತುಮಕೂರು ಜೈಲಿಗೆ, ಮನೋಹರ್ ಯಾವಡೆಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ, ಅಮೀತ್ ದಿಗ್ವೇಕರ್ ಅನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದ್ದು, ಆರೋಪಿಗಳು ಒಂದು ಕಡೆ ಸೇರಿದರೆ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೋಪಿಗಳನ್ನು ಆಡಳಿತಾತ್ಮಕ ಕಾರಣದ ಅನ್ವಯ ವರ್ಗಾವಣೆ ಮಾಡಲಾಗುವುದು. ಒಂದು ವೇಳೆ ಆರೋಪಿಗಳ ವಿಚಾರಣೆ ಅಗತ್ಯವಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಪ್ರಕ್ರಿಯೆ ನಡೆಸಲು ರಾಜ್ಯ ಕಾರಾಗೃಹ ಎಡಿಜಿಪಿ ಮುಂದಾಗಿದ್ದಾರೆ ಎನ್ನಲಾಗಿದೆ.