ಬ್ರಹ್ಮಾವರ ತಾಲೂಕು ಮಟ್ಟದ ಪಂದ್ಯಕೂಟಗಳ ಉದ್ಘಾಟನೆ
ಉಡುಪಿ, ಆ.23: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣ ಇಲಾಖೆ ಕಛೇರಿ ಬ್ರಹ್ಮಾವರ ವಲಯ ಹಾಗೂ ತೋನ್ಸೆ ಹೂಡೆ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ವಿವಿಧ ಪಂದ್ಯಕೂಟಗಳು ಗುರುವಾರ ಕೆಮ್ಮಣ್ಣು ಮೈದಾನದಲ್ಲಿ ಜರಗಿದವು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪ್ರಕಾಶ್ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತದೆ. ಇದರಿಂದ ದೈಹಿಕವಾಗಿ ಸಮರ್ಥ ರಾದರೆ ಮಾನಸಿಕವಾಗಿ ಸದೃಢಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡುವುದೇ ಉದ್ದೇಶವಾಗಿರದೆ ದೈಹಿಕವಾಗಿ, ಮಾನಸಿಕವಾಗಿ ಸಿದ್ಧಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿವಿಧ ಪಂದ್ಯಕೂಟವನ್ನು ಮುಖ್ಯ ಅತಿಥಿಗಳಾದ ಉದ್ಯಮಿ ಅಶ್ರಫ್ ಕೋಡಿಬೆಂಗ್ರೆ, ಯಾಸರ್ ಅಕ್ರಮ್ ಮೌಲಾ, ಶಬ್ಬೀರ್ ಮಲ್ಪೆ, ನಜೀರ್ ಜಿ. ಉದ್ಘಾಟಿಸಿದರು. ವೇದಿಕೆಯಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ, ಕಾರ್ಯದರ್ಶಿ ಜಿ. ಇಮ್ತಿಯಾಝ್, ಬ್ರಹ್ಮಾವರ ವಲಯ ಪ್ರಾಥಮಿಕ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ದಿನಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸಾಲಿಹಾತ್ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭುಜಂಗ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂ ಪಿಸಿ, ವಂದಿಸಿದರು.
ಬ್ರಹ್ಮಾವರ ವಲಯದ ಮಂದಾರ್ತಿ, ಮಣಿಪಾಲ, ಬ್ರಹ್ಮಾವರ ಹಾಗೂ ಪೆರ್ಡೂರು ಹೋಬಳಿಗಳ ಸುಮಾರು 400ಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದರು.
ವಿವಿಧ ಪಂದ್ಯಾಕೂಟಗಳ ಫಲಿತಾಂಶ
ಬಾಲಕಿಯರ ವಿಭಾಗ: ಕಬಡ್ಡಿ- ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖೋಖೋ- ಬ್ರಹ್ಮಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಲಿಬಾಲ್- ಹಳುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತ್ರೋಬಾಲ್- ಹಾರಾಡಿ ವಿದ್ಯಾಮಂದಿರ ಅನುದಾನಿತ ಶಾಲೆ.
ಬಾಲಕರ ವಿಭಾಗ: ಕಬಡ್ಡಿ- ಸಾಬ್ರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖೋಖೋ- ಆವರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಲಿಬಾಲ್- ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತ್ರೋಬಾಲ್- ಪರ್ಕಳ ಬಿ.ಎಂ. ಆಂಗ್ಲ ಮಾಧ್ಯಮ ಶಾಲೆ.