ಪಶ್ಚಿಮಬಂಗಾಳದ ದೇವಾಲಯದಲ್ಲಿ ಕಾಲ್ತುಳಿತ: ಕನಿಷ್ಠ 6 ಸಾವು, 27ಕ್ಕೂ ಅಧಿಕ ಮಂದಿಗೆ ಗಾಯ
ಕೋಲ್ಕತಾ, ಆ. 23: ಉತ್ತರ 24 ಪರಗಣಗಳ ಜಿಲ್ಲೆಯ ಕಚುವಾ ಲೋಕನಾಥ್ ದೇವಾಲಯದಲ್ಲಿ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 27ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಭಾರೀ ಮಳೆಗೆ ದೇವಾಲಯದ ಆವರಣ ಗೋಡೆ ಕುಸಿದ ಸಂದರ್ಭ ಅದರಾಚೆ ಇದ್ದ ಅಂಗಡಿ ಸಮೀಪ ಭಕ್ತರು ನಿಂತಿದ್ದರು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ಕೂಡಲೇ ಗಾಯಗೊಂಡವರನ್ನು ಬರಿಶಾತ್ ಆಸ್ಪತ್ರೆ, ನ್ಯಾಶನಲ್ ಮೆಡಿಕಲ್ ಕಾಲೇಜು ಹಾಗೂ ಎಸ್ಎಸ್ಕೆಎಂ ಸೇರಿದಂತೆ ಹಲವು ವೈದ್ಯಕೀಯ ಕೇಂದ್ರಗಳಿಗೆ ಕೊಂಡೊಯ್ದು ದಾಖಲಿಸಲಾಯಿತು. ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೆ, ಕಾಲ್ತುಳಿತವನ್ನು ತಪ್ಪಿಸಬಹುದಿತ್ತು ಎಂದು ಮೃತಪಟ್ಟ ಕುಟುಂಬದ ಸದಸ್ಯರು ಹೇಳಿದ್ದಾರೆ.
ನ್ಯಾಶನಲ್ ವೈದ್ಯಕೀಯ ಕಾಲೇಜಿಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಗಾಯಗೊಂಡ ಉಳಿದವರನ್ನು ಭೇಟಿಯಾಗಲು ಎಸ್ಎಸ್ಕೆಎಂ ಆಸ್ಪತ್ರೆಗೆ ತೆರಳುವ ಮುನ್ನ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದರು.