ಉಡುಪಿ: ಮಾಧ್ಯಮಗಳ ವಿರುದ್ಧ ಎಸ್ಸೆಸ್ಸೆಫ್ ಧರಣಿ
ಉಡುಪಿ, ಆ.24: ಅಮಾಯಕರನ್ನು ಭಯೋತ್ಪಾದಕರಾಗಿ ಚಿತ್ರಿಸುತ್ತಿರುವು ದಾಗಿ ಆರೋಪಿಸಿ ಮಾಧ್ಯಮಗಳ ವಿರುದ್ಧ ಎಸ್ಎಸ್ಎಫ್ ಉಡುಪಿ ಜಿಲ್ಲಾ ಘಟಕ ಆ. 23ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ.ಅಬ್ದುರಝ್ವಿ ಕಲ್ಕಟ್ಟ, ಎನ್ಐಎ ಯಾವುದೇ ತನಿಖೆ ನಡೆಸದೆ ಮಾಧ್ಯಮಗಳು ರವೂಫ್ರನ್ನು ಭಯೋತ್ಪಾದಕ ಎಂಬುದಾಗಿ ಚಿತ್ರೀ ಕರಿಸಲು ಹೊರಟಿವೆ. ಮಾಧ್ಯಮಗಳು ಸಮಾಜದ ಬೆಳಕಾಗಿರಬೇಕು. ಧರ್ಮಕ್ಕೆ ದ್ರೋಹ ಬಗೆಯುವವರಾಗಬಾರದು ಎಂದು ಟೀಕಿಸಿದರು.
ಇಸ್ಲಾಂ ಪ್ರೀತಿಯನ್ನು ಕಲಿಸಿಕೊಡುತ್ತದೆ. ಭಯೋತ್ಪಾದನೆಗೆ ಎಂದಿಗೂ ಕೂಡ ಅನುಮತಿಸಿಲ್ಲ. ರವೂಫ್ ಕುರಿತು ಆಧಾರ ರಹಿತ ಆರೋಪವನ್ನು ಬಿತ್ತರಿಸಿದ ಮಾಧ್ಯಮಗಳು ಕರ್ನಾಟಕ ಜನತೆಯೊಂದಿಗೆ ಕ್ಷಮೆಯಾಚಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಜಮಾಅತ್ ಜಿಲ್ಲಾ ಕೋಶಾಧಿಕಾರಿ ಹಾಜಿ ಅಬ್ದುಲ್ ವಹೀದ್, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಮೊಯ್ಯದ್ದೀನ್ ಸಖಾಫಿ ಅಬ್ದುಲ್ ಖಯ್ಯೂಂ ಹೂಡೆ, ಫಾರೂಕ್, ಸಮೀರ್ ಕೋಡಿ, ಅಬ್ದುಲ್ ಅಝೀಝ್ ಕಾಪು, ಶಮೀಮ್ ಉಡುಪಿ, ನಾಸಿರ್ ಉಚ್ಚಿಲ, ನಿಝಾಮ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು
ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಮ್ ಮಜೂರು ಸ್ವಾಗತಿಸಿದರು. ತ್ವಾಯಿರ್ ಮೂಡುಗೋಪಾಡಿ ವಂದಿಸಿದರು.