ಭಾರತದಲ್ಲಿ ಘನತೆಯಿಂದ ಜೀವಿಸಬೇಕಾದರೆ ಆತ್ಮ ರಕ್ಷಣಾ ಕಲೆ ಅನಿವಾರ್ಯವಾಗಿದೆ: ರಿಯಾಝ್ ಫರಂಗಿಪೇಟೆ
ಸಾರ್ವಜನಿಕ ಕ್ರೀಡಾ ಕೂಟ
ಫರಂಗಿಪೇಟೆ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ಏರಿಯಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕ ಕ್ರೀಡಾ ಕೂಟ - 2019 ಕುಂಜತ್ಕಳ ಮೈದಾನದಲ್ಲಿ ನಡೆಯಿತು. ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಯೋಗಾಸನ ಮತ್ತು ದೈಹಿಕ ಕವಾಯತ್ತು ತರಬೇತಿ ನೀಡಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಪ್ರತಿಯೊಬ್ಬ ನಾಗರಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಯತ್ನ ಶ್ಲಾಘನೀಯವಾದದ್ದು ಎಂದು ಅಭಿಪ್ರಾಯಪಟ್ಟರು.
ಯುವ ಸಮುದಾಯ ದೈಹಿಕ ಕಸರತ್ತು ಮಾಡುವುದರೊಂದಿಗೆ ಆರೋಗ್ಯಕ್ಕೆ ಹಾನಿಕಾರಕವಾದ ಪ್ರತಿಯೊಂದು ವಸ್ತುವನ್ನು ವರ್ಜಿಸು ವುದರೊಂದಿಗೆ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಹಾಗೂ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅಮಾನವೀಯ ವಿದ್ಯಮಾನಗಳನ್ನು ಗಮನಿಸಿದಾಗ ಭಾರತದಲ್ಲಿ ಘನತೆಯಿಂದ ಜೀವಿಸಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಸ್ವಯಂ ರಕ್ಷಣೆಗಾಗಿ ಆತ್ಮ ರಕ್ಷಣಾ ಕಲೆಯನ್ನು ಕಲಿಯುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ಸಲೀಂ ಕುಂಪಣಮಜಲು, ಫರಂಗಿಪೇಟೆ ಏರಿಯಾ ಅಧ್ಯಕ್ಷರೂ ಪುದು ಗ್ರಾಮ ಪಂಚಾಯತ್ ಸದಸ್ಯರೂ ಆದ ನಝೀರ್ ಹತ್ತನೇ ಮೈಲುಕಲ್ಲು, ಬಶೀರ್ ಅಮೆಮಾರ್, ಇಕ್ಬಾಲ್ ಅಮೆಮಾರ್ ಮತ್ತು ಯೋಗ ತರಬೇತುದಾರ ಇಸ್ಮಾಯಿಲ್ ಉಪಸ್ಥಿತರಿದ್ದರು. ಶರೀಫ್ ಅಮೆಮಾರ್ ಸ್ವಾಗತಿಸಿ, ಅಶ್ಫಕ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿದರು.