ಪತ್ರಕರ್ತ ಚಂದ್ರೇಶ್ ಗೋರಡ್ಕ ನಿಧನ
ಮಂಗಳೂರು: ಸುಳ್ಯದ ಹಿರಿಯ ಪತ್ರಕರ್ತರಾಗಿದ್ದ ಚಂದ್ರೇಶ್ ಗೋರಡ್ಕ (48) ಅವರು ರಾತ್ರಿ 2.30ಕ್ಕೆ ನಿಧನರಾದರು.
ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾದ ಅವರನ್ನು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ 3 ವಾರ ಚಿಕಿತ್ಸೆ ಪಡೆದ ಅವರನ್ನು, ಲಿವರ್ ಡ್ಯಾಮೇಜ್ ಹಾಗೂ ಕಿಡ್ನಿ ವೈಫಲ್ಯ ಗೊಂಡಿದ್ದುದರಿಂದ ವೈದ್ಯರ ಸಲಹೆ ಮೇರೆಗೆ ವಾರದ ಹಿಂದೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಂದ್ರೇಶ್ ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಪಯಸ್ವಿನಿ ಪತ್ರಿಕೆ ಸಂಪಾದಕರಾಗಿ, ಬಳಿಕ ಸುಳ್ಯದಲ್ಲಿದ್ದ ಶ್ರೀ ಚಾನೆಲ್ ಕಾರ್ಯನಿರ್ವಾಹಕರಾಗಿ ದುಡಿದಿದ್ದರು. ಕೆಲವು ವರ್ಷಗಳಿಂದ ಪತ್ರಿಕಾ ವೃತ್ತಿಯಿಂದ ದೂರವಾಗಿ ಬೇರೆ ವೃತ್ತಿ ಮಾಡುತ್ತಿದ್ದರು. ಪುಸ್ತಕ ವ್ಯಾಪಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಅವರ ಪತ್ರಕಾ ಸೇವೆಯನ್ನಿ ಗುರುತಿಸಿ ಕಳೆದ ಜುಲೈ ತಿಂಗಳಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿತ್ತು.
ಮೃತರು ಪತ್ನಿ , ಇಬ್ಬರು ಪುತ್ರರು , ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.