ವಿಟ್ಲ ಪೊಲೀಸ್ ಠಾಣೆಯಲ್ಲಿ ನಡೆಯಿತು ಸೀಮಂತ...!
ತುಳುನಾಡ ಕಟ್ಟು ಕಟ್ಟಳೆಗಳಲ್ಲಿ ಸೀಮಂತ ಕೂಡಾ ಒಂದು. ಮದುವೆಯಾದ ಯುವತಿ ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ. ಇಂತಹುದೇ ಒಂದು ಸೀಮಂತ ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ಧೂರಿಯಾಗಿಯೇ ನಡೆಯಿತು.
ಅಂದ ಹಾಗೆ ಸೀಮಂತದ ನಾಯಕಿ ಬೇರಾರೂ ಅಲ್ಲ..! ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಹೋಮ್ ಗಾರ್ಡ್ ಸಿಬ್ಬಂದಿ ಆಗಿರುವ ಪ್ರಸ್ತುತ ತುಂಬು ಗರ್ಬಿಣಿ ಮಲ್ಲಿಕಾ ಅವರು.
ಕೊಡಂಗಾಯಿ ಪಳ್ಳಿಗದ್ದೆ ಕೊರಗಪ್ಪ ಗೌಡ, ಇಂದಿರಾ ದಂಪತಿಯ ಪುತ್ರಿಯಾಗಿರುವ ಮಲ್ಲಿಕಾ ಅವರನ್ನು ಪುತ್ತೂರು ಕೆಮ್ಮಾಯಿಯ ಕೇಶವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪತಿಯ ಮನೆಯಲ್ಲಿ ಕಳೆದ ತಿಂಗಳೇ ಸೀಮಂತವಾಗಿತ್ತು. ಆದರೆ ವಿಟ್ಲ ಪೊಲೀಸರು ತುಂಬು ಗರ್ಭಿಣಿ ಮಲ್ಲಿಕಾರಿಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ.
ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಹಾಗೂ ಸಿಬ್ಬಂದಿ ಮಲ್ಲಿಕಾ ಅವರಿಗೆ ಅದ್ಧೂರಿ ಸೀಮಂತ ಮಾಡಿಸಿದರು. ಮಹಿಳಾ ಪೊಲೀಸರು ಹಣೆಗೆ ಕುಂಕುಮದ ತಿಲಕವಿಟ್ಟು ತಲೆಗೆ ಚೆಂಡು ಮಲ್ಲಿಗೆ ತೊಡಿಸಿದರು. ಹೂವು, ಸೀರೆ ಕೊಟ್ಟರು. ಎಲೆ ಅಡಿಕೆಯನ್ನು ಕೈಗೆ ನೀಡಿದರು. ಸಿಹಿ ವಿತರಿಸಿದರು. ಗೌಜಿಯ ಸೀಮಂತಕ್ಕೆ ಠಾಣೆ ಸಾಕ್ಷಿಯಾಯಿತು.