ಕಾರಾಗೃಹ, ಅಗ್ನಿಶಾಮಕ ಸಿಬ್ಬಂದಿ ವೇತನ ಪರಿಷ್ಕರಣೆ: ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ
ಬೆಂಗಳೂರು, ಸೆ.10: ಕಾರಾಗೃಹ ಹಾಗೂ ಅಗ್ನಿಶಾಮಕ ಸಿಬ್ಬಂದಿ ವೇತನ ಪರಿಷ್ಕರಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಔರಾದ್ಕರ್ ನೇತೃತ್ವದ ಸಮಿತಿ ವರದಿಯಂತೆ ಪರಿಷ್ಕೃತ ವೇತನ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ದಸರಾ ಹಬ್ಬದ ಕೊಡುಗೆ ರೂಪದಲ್ಲಿ ವರದಿ ಜಾರಿಗೊಳಿಸಲಾಗುತ್ತಿದೆ. ಯಾವುದೇ ಗೊಂದಲ ಹಾಗೂ ಪರಿಷ್ಕರಣೆ ಇಲ್ಲದಂತೆಯೇ ವರದಿ ಜಾರಿ ಮಾಡಲಾಗುವುದು. ಈ ಸಂಬಂಧ ಸಚಿವ ಸಂಪುಟದಲ್ಲಿಯೂ ಮುಕ್ತ ಚರ್ಚೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಔರಾದ್ಕರ್ ವರದಿ ಜಾರಿಯಿಂದಾಗಿ ಕಾನ್ಸ್ಟೇಬಲ್ ಸೇರಿದಂತೆ ಡಿವೈಎಸ್ಪಿ ಹಂತದ ಅಧಿಕಾರಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಪೊಲೀಸರ ವೇತನದಲ್ಲಿ ಹೆಚ್ಚಳ ಅಗತ್ಯ ಇರುವಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿಯು 2016 ರಲ್ಲಿ ವರದಿ ಸಲ್ಲಿಸಿತ್ತು.
ಸಮಿತಿಯು ಶೇ.30 ರಿಂದ 35 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸ್ಸು ಮಾಡಿತ್ತು. ಅದರಂತೆ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.