ವದಂತಿಗಳಿಗೆ ತೆರೆ ಎಳೆದ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ
ಬೆಂಗಳೂರು, ಸೆ.11: ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನಾನು ಯಾವುದೇ ಸಂಘ-ಸಂಸ್ಥೆಗೆ ನಾನು ಸೇರಿಲ್ಲ, ಅದರ ಶಾಖೆಯನ್ನು ಕೊಯಂಬತ್ತೂರಿನಲ್ಲಿ ಆರಂಭಿಸಿಲ್ಲ ಎಂದು ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಸ್ಪಷ್ಟ ಪಡಿಸಿದ್ದಾರೆ.
ಸಂಘ-ಸಂಸ್ಥೆಯೊಂದನ್ನು ಸೇರಿ ಅಣ್ಣಾಮಲೈ ಸಕ್ರಿಯರಾಗಿದ್ದಾರೆ ಎನ್ನುವ ವದಂತಿಗಳು ಸುಳ್ಳಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ವದಂತಿಗಳನ್ನು ಯಾರೂ ನಂಬಬೇಡಿ. ಕೇಂದ್ರ ಸರಕಾರ ಇನ್ನೂ ನನ್ನ ರಾಜೀನಾಮೆ ಅಂಗೀಕರಿಸಿಲ್ಲ, ಇದರಿಂದಾಗಿ ನಾನು ಸರಕಾರದ ಒಂದು ಭಾಗವಾಗಿ ಉಳಿದಿದ್ದೇನೆ. ಸದ್ಯ ನಾನು ದೇಶದ ವಿವಿಧೆಡೆ ಸುತ್ತಾಟ, ಧಾರ್ಮಿಕ ಸ್ಥಳಗಳಿಗೆ ಭೇಟಿ, ಸಾರ್ವಜನಿಕರೊಂದಿಗಿನ ಸಂವಾದಗಳ ಮೂಲಕ ಜ್ಞಾನ ವೃದ್ಧಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇನೆ. ನನ್ನ ರಾಜೀನಾಮೆ ಅಂಗೀಕಾರಗೊಂಡ ನಂತರ ಮುಂದೆ ಕೈಗೊಳ್ಳುವ ನಿಲುವು -ಕ್ರಮಗಳ ಬಗ್ಗೆ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದೇನೆಂದು ಅವರು ತಿಳಿಸಿದ್ದಾರೆ.
Next Story