ಭಾರತ- ದಕ್ಷಿಣ ಆಫ್ರಿಕ ಮೊದಲ ಟಿ-20ಗೆ ಮಳೆ ಭೀತಿ
ಎಚ್ಪಿಸಿಎ ಮೆದಾನದ ಸಿಬ್ಬಂದಿಗೆ ಸತ್ವಪರೀಕ್ಷೆ
ಹೊಸದಿಲ್ಲಿ, ಸೆ.11: ಭಾರತ ತಂಡ ರವಿವಾರ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್(ಎಚ್ಪಿಸಿಎ)ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟಿ-20 ಸರಣಿಯ ಮೊದಲ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ. ಹವಾಮಾನ ಇಲಾಖೆ ಬುಧವಾರದಿಂದಲೇ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರವಿವಾರದ ಪಂದ್ಯದ ಮೇಲೆ ಮಳೆಯ ಕಾರ್ಮೋಡ ಕವಿದಿದೆ. ಎಚ್ಪಿಸಿಎ ಮೈದಾನದ ಸಿಬ್ಬಂದಿಗೆ ಪಿಚ್ನ್ನು ಪಂದ್ಯಕ್ಕೆ ಸಜ್ಜುಗೊಳಿಸಬೇಕಾದ ಕಠಿಣ ಸವಾಲು ಎದುರಾಗಿದೆ.
ಧರ್ಮಶಾಲಾದಲ್ಲಿ ಒಮ್ಮೆ ಮಳೆ ಆರಂಭವಾದರೆ ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮೈದಾನದ ಸಿಬ್ಬಂದಿ ತಮ್ಮ ಕೆಲಸವನ್ನು ಮಾಡಲಿದ್ದಾರೆ. ಆದರೆ, ರವಿವಾರ ಮಳೆ ಸುರಿಯುವ ಸಾಧ್ಯತೆಯಿದ್ದು,ಇದು ಮೈದಾನದ ಸಿಬ್ಬಂದಿಗೆ ನಿದ್ದೆಯಿಲ್ಲದ ರಾತ್ರಿ ಕಳೆಯುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡ ಹಿರಿಯ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಭುವನೇಶ್ವರ ಕುಮಾರ್ಗೆ ವಿಶ್ರಾಂತಿ ನೀಡಿದೆ. ದಕ್ಷಿಣ ಆಫ್ರಿಕ ತಂಡ ಕಾಗಿಸೊ ರಬಾಡ ಸೇವೆಯನ್ನು ಬಳಸಿಕೊಳ್ಳಲಿದೆ.