ಕನ್ನಡ ಭಾಷೆ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ: ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ, ಸೆ.15: ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಯಾರೇ ಬಂದರೂ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಭಾಷೆ 2500 ವರ್ಷಗಳಷ್ಟು ಹಳೆಯದ್ದಾಗಿದ್ದು, ಇದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕನ್ನಡ ನಾಡಿನಲ್ಲಿ ಜನ ಬದುಕಿರುವಷ್ಟು ದಿನ ಕನ್ನಡ ಜೀವಂತವಾಗಿರುತ್ತದೆ. ಅಷ್ಟು ಹಳೆಯ ಭಾಷೆ ಕನ್ನಡವಾಗಿದ್ದು, ನಮ್ಮ ಭಾಷೆ ನಮ್ಮ ಅಸ್ಮಿತೆಯಾಗಿದೆ. ಯಾರೇ ಆದರೂ ಅದನ್ನು ಅಳಿಸಲು ಸಾಧ್ಯವಾಗುವುದಿಲ್ಲ. ಮುಸ್ಲಿಮರು, ಬ್ರಿಟಿಷರು, ಪೋರ್ಚುಗೀಸರು ಸೇರಿದಂತೆ ಅನೇಕರು ಇಲ್ಲಿ ಆಡಳಿತ ನಡೆಸಿದ್ದು, ಅಂದಿನಿಂದಲೂ ನಮ್ಮ ಭಾಷೆ ಗಟ್ಟಿಯಾಗಿ ನೆಲೆ ನಿಂತಿದೆ ಎಂದರು.
ಶನಿವಾರ ಅಮಿತ್ ಶಾ ಹಿಂದಿ ದಿವಸ್ ಅಂಗವಾಗಿ ದೇಶದ ಬಹುತೇಕರು ಹಿಂದಿ ಮಾತನಾಡುತ್ತಾರೆ, ಹಿಂದಿ ದೇಶವನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದಿದ್ದರು. ಆದರೆ, ಕಾರಜೋಳ, ಕನ್ನಡ ಭಾಷೆಯು ನಿರಂತರವಾಗಿ ಜೀವಂತವಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎನ್ನುವ ಮೂಲಕ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.