ಬಿಜೆಪಿಯಲ್ಲೀಗ ಸಂಘಟನಾ ಪರ್ವ: ನಳಿನ್ ಕುಮಾರ್ ಕಟೀಲ್
ಮೂಡುಬಿದಿರೆ: ಬಿಜೆಪಿಯಲ್ಲೀಗ ಸಂಘಟನಾ ಪರ್ವ ನಡೆದಿದೆ. ಎಲ್ಲೆಡೆ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ಕಾರ್ಯದಲ್ಲಿ ಯಶಸ್ಸು ಕಾಣಬೇಕಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕಾರ್ಕಳಕ್ಕೆ ತೆರಳುವ ಹಾದಿಯಲ್ಲಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಮೂಡುಬಿದಿರೆಗೆ ಭೇಟಿ ನೀಡಿ ಇಲ್ಲಿನ ಹಳೆ ಪೊಲೀಸ್ ಠಾಣೆಯ ಬಳಿ ಪಕ್ಷದ ಪ್ರಮುಖರಿಂದ ಸ್ವಾಗತ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಆರೋಪಗಳು ಬಂದಾಗ ಅವುಗಳನ್ನು ಎದುರಿಸಬೇಕು. ಕಾನೂನಿಗೆ, ನ್ಯಾಯಾಲಯಕ್ಕೆ, ಸಂವಿಧಾನಕ್ಕೆ ಗೌರವ ಕೊಡಬೇಕೇ ಹೊರತು ಬೀದಿಯಲ್ಲಿ ನಿಂತು ಹೋರಾಟ ಮಾಡುವುದಲ್ಲ ಎಂದು ಡಿಕೆಶಿ ಪ್ರಕರಣಕ್ಕೆ ಸಂಬಂಧಿಸಿ ಅವರು ಹೇಳಿದರು. ರಾಜ್ಯ ಸರ್ಕಾರ ನೆರೆ ನಿರಾಶ್ರಿತರಿಗೆ ಅತ್ಯುತ್ತಮ ಪರಿಹಾರ ನೀಡಲಿದೆ ಎಂದು ಪ್ರತಿಕ್ರಿಯಿಸಿದ ಅವರು ಸಂಸದರಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯ ಸವಾಲನ್ನು ಸ್ವೀಕರಿಸಿ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವಿದೆ ಎಂದರು.
ಪಕ್ಷದ ಪ್ರಮುಖರಾದ ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ ಎಂ, ಬಾಹುಬಲಿ ಪ್ರಸಾದ್, ಕೆ.ಕೃಷ್ಣರಾಜ ಹೆಗ್ಡೆ, ಶಾಂತಿ ಪ್ರಸಾದ್ ಹೆಗ್ಡೆ ರಾಜೇಶ್ ಮಲ್ಯ, ಪುರಸಭಾ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.