ಮಟ್ಕಾ ಅಡ್ಡೆಗೆ ದಾಳಿ: ಇಬ್ಬರ ಬಂಧನ
ಮಂಗಳೂರು, ಸೆ.16: ಕಾವೂರು ಸಮೀಪದ ಮುಲ್ಲಕಾಡು ಆಕಾಶಭವನ ದ್ವಾರದ ಬಳಿ ನಡೆಯುತ್ತಿದ್ದ ಮಟ್ಕಾ ಜೂಜು ಅಡ್ಡೆಗೆ ಕಾವೂರು ಪೊಲೀಸರು ಸೋಮವಾರ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಆಕಾಶ ಭವನ ಆನಂದ ನಗರದ ಸುಧೀರ್ ಕುಮಾರ್ (54) ಮತ್ತು ಬಿಜೈ ಕಾಪಿಕಾಡ್ನ ಯತಿನ್ ದೇವಾಡಿಗ (29) ಬಂಧಿತರು.
ಕಾವೂರು ಪೊಲೀಸ್ ಇನ್ಸ್ಪೆಕ್ಟರ್ ರಾಘವ ಎಸ್. ಪಡೀಲ್ ಅವರು ಸಿಬಂದಿ ಜತೆ ಬೆಳಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಆಕಾಶ ಭವನ ದ್ವಾರದ ಬಳಿ ಸ್ಕೂಟರ್ನಲ್ಲಿ ಕುಳಿತು ಆರೋಪಿ ಸುಧೀರ್ ಕುಮಾರ್ ಮಟ್ಕಾ ಜೂಜಾಟ ನಡೆಸುತ್ತಿರುವುದು ಕಂಡು ಬಂತು. ಆತನನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ 6550 ರೂ. ನಗದು ಮತ್ತು 40,000 ರೂ. ವೌಲ್ಯದ ಸ್ಕೂಟರ್, ಅಂಕಿ ಬರೆಯುವ ಹಾಳೆ ಇತ್ಯಾದಿಗಳನ್ನು ವಶಪಡಿಸಿದರು.
ವಿಚಾರಣೆ ನಡೆಸಿದಾಗ ಆರೋಪಿ ಸುಧೀರ್ ಮಟ್ಕಾ ಜೂಜಾಟಕ್ಕೆ ಸಂಗ್ರಹಿಸಿದ ಹಣವನ್ನು ಯತಿನ್ ದೇವಾಡಿಗನಿಗೆ ನೀಡುತ್ತಿದ್ದನೆಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಯತಿನ್ನನ್ನು ಪೊಲೀಸರು ಬಂಧಿಸಿದರು.
Next Story