ಉಳ್ಳಾಲದಲ್ಲಿ ಮಾರಾಮಾರಿ: ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ ಗೆ ಗಾಯ
ಉಳ್ಳಾಲ,ಸೆ.23: ಉಳ್ಳಾಲದ ಮುಕ್ಕಚ್ಚೇರಿ ಸಮೀಪ ರವಿವಾರ ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಾರಾಮಾರಿಯಲ್ಲಿ ಶೂಟೌಟ್ ಕೂಡಾ ನಡೆದಿದೆ ಎಂದು ಹೇಳಲಾಗಿದ್ದು, ಇದು ಇನ್ನೂ ಖಚಿತವಾಗಿಲ್ಲ.
ಸುಹೈಲ್ ಕಂದಕ್ ಅವರ ತಲೆಗೆ ಪೆಟ್ಟಾಗಿದ್ದು ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯೊಂದಕ್ಕೆ ಸಂಬಂಧಿಸಿ ಸುಹೈಲ್ ಕಂದಕ್ ಹಾಗೂ ಇನ್ನೊಂದು ಗುಂಪಿನ ನಡುವೆ ಉಳ್ಳಾಲದ ಕಿಳರಿಯ ನಗರದಲ್ಲಿ ವಿವಾದ ನಡೆದು ಘಟನೆ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಸುಹೈಲ್ ಕಂದಕ್ ಮೇಲೆ ಬ್ಯಾಟು, ದೊಣ್ಣೆ ಇತ್ಯಾದಿಗಳಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಶೂಟೌಟ್ ಕೂಡಾ ನಡೆದಿದೆ ಎಂದು ಹೇಳಲಾಗಿದೆ ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಘಟನೆ ನಡೆದ ಸ್ಥಳದಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಒಂದು ಇನ್ನೋವಾ ವಾಹನ ತೀವ್ರ ಜಖಂಗೊಂಡಿದೆ.
ಘಟನೆ ನಡೆದ ಸ್ಥಳಕ್ಕೆ ಹಾಗೂ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಡಿಸಿಪಿ (ಕ್ರೈಂ) ಲಕ್ಷ್ಮೀ ಗಣೇಶ್, ಡಿಸಿಪಿ(ಲಾ) ಅರುಣಾಂಗ್ಸು ಗಿರಿ, ಎಸಿಪಿ ಕೋದಂಡ ರಾಮ, ಉಳ್ಳಾಲ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಸಿಸಿಬಿ ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.