ಬುಡೋಳಿ: ಹೆದ್ದಾರಿ ಬದಿಯ ಕಮರಿಗೆ ಮಗುಚಿದ ಟ್ಯಾಂಕರ್; ಚಾಲಕನಿಗೆ ಗಾಯ
ಬಂಟ್ವಾಳ, ಸೆ. 23: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ಬದಿಯ ಕಮರಿಗೆ ಮಗುಚಿದ ಪರಿಣಾಮ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಘಟನೆಯಿಂದ ಗ್ಯಾಸ್ ಟ್ಯಾಂಕರ್ ಚಾಲಕ, ತಮಿಳುನಾಡು ಮೂಲದ ರಾಜ ಎಂಬವರಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ: ಗ್ಯಾಸ್ ತುಂಬಿಸಲೆಂದು ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಮಾಣಿಯ ಬುಡೋಳಿ ಸಮೀಪ ಬಸ್ ವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಚಾಲಕ ನಿಯಂತ್ರಣ ಕಳೆದು ಟ್ಯಾಂಕರ್ ಹೆದ್ದಾರಿ ಬದಿಯ ಕಮರಿಗೆ ಮಗುಚಿ ಈ ಅವಘಡ ಸಂಭವಿಸಿದೆ. ಪರಿಣಾಮ ಚಾಲಕನಿಗೆ ಗಾಯಗಳಾಗಿವೆ.
ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Next Story