ಸಹಕಾರಿಯಿಂದ ಸರ್ಕಾರಿ ಶಾಲೆಗೆ ನೆರವು: ಅಮೃತ್ ರೈ ಭರವಸೆ
ಸಮಷ್ಠಿ ಸೌಹಾರ್ದ ಸಹಕಾರಿಯ 4ನೇ ಮಹಾಸಭೆ
ಮೂಡುಬಿದಿರೆ: ನಮ್ಮ ಸಹಕಾರಿಯು ಆರ್ಥಿಕ ವ್ಯವಹಾರ ಮಾತ್ರ ಮಾಡುವುದಲ್ಲ ಸಮಾಜಮುಖಿ ಸೇವೆಗಳನ್ನು ಮಾಡುವಲ್ಲಿಯೂ ಹಲವಾರು ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಸಮಷ್ಠಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಅಮೃತ್ ರೈ ಹೇಳಿದರು.
ಪೊನ್ನೆಚಾರಿ ದೇವಳದ ಸಭಾಂಗಣದಲ್ಲಿ ಭಾನುವಾರ ಸಮಷ್ಠಿ ಸೌಹಾರ್ದ ಸಹಕಾರಿ ನಿಯಮಿತದ 4ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಸ್ಥೆಯ ಸದಸ್ಯರಿಗೆ ಸಣ್ಣ ಕೈಗಾರಿಕೆಗಳ ಬಗ್ಗೆ ತರಬೇತಿಯನ್ನು ನೀಡಿ, ವ್ಯವಹಾರಿಕವಾಗಿ ಅವರನ್ನು ಬಲಗೊಳಿಸುವ ಯೋಜನೆ ನಮ್ಮ ಸಂಸ್ಥೆಯಿಂದ ನಡೆಯಲಿದೆ. ವಿವಿಧ ಕಾರ್ಯಕ್ರಮಗಳ ಜೊತೆಗೆ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಸಹಿತ ಆರೋಗ್ಯ ಶಿಬಿರವನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳುವಲ್ಲಿ ಚಿಂತನೆ ನಡೆಸಿದ್ದೇವೆ ಎಂದರು.
ಸಂಸ್ಥೆಯ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಜಿಲ್ಲಾ ಸಂಯೋಜಕ ಗುರುಪ್ರಸಾದ್ ಬಂಗೇರ ಅವರನ್ನು ಸಹಕಾರಿ ವತಿಯಿಂದ ಸನ್ಮಾನಿಸಲಾಯಿತು.
ಗುರು ಪ್ರಸಾದ್ ಅವರು ಸಂಸ್ಥೆಯ ಸದಸ್ಯರಿಗೆ ಸಹಕಾರಿಯ ಕುರಿತು ಮಾಹಿತಿ ನೀಡಿದರು.
ಉಪಾಧ್ಯಕ್ಷ ಗಣನಾಥ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶೋರ್ 2018-19ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಗಣಪತಿ ಭಟ್ ವಂದಿಸಿದರು. ಸಹಕಾರಿ ನಿರ್ದೇಶಕರು ಉಪಸ್ಥಿತರಿದ್ದರು. ಸದಸ್ಯ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.