ಮೋದಿಗೆ ಪ್ರಶಸ್ತಿ ನೀಡುವ ನಿರ್ಧಾರ ತ್ಯಜಿಸುವಂತೆ ಗೇಟ್ಸ್ ಪ್ರತಿಷ್ಠಾನಕ್ಕೆ ವಿದ್ಯಾರ್ಥಿಗಳ ಮನವಿ
ಹೊಸದಿಲ್ಲಿ,ಸೆ.23: ಪ್ರಧಾನಿ ಮೋದಿಗೆ ಗ್ಲೋಬಲ್ ಗೋಲ್ಕೀಪರ್ ಪ್ರಶಸ್ತಿ ನೀಡುವ ನಿರ್ಧಾರವನ್ನು ಕೈಬಿಡುವಂತೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನಕ್ಕೆ ಗೇಟ್ಸ್ ಕೇಂಬ್ರಿಡ್ಜ್ನ ಹಾಲಿ ಮತ್ತು ಹಳೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಈ ಕುರಿತು ಬರೆದಿರುವ ಪತ್ರದಲ್ಲಿ, ಮೋದಿ ಆಡಳಿತದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಕಡೆಗಣಿಸಿ ಅವರ ಸ್ವಚ್ಛಭಾರತ ಯೋಜನೆಗಾಗಿ ಗ್ಲೋಬಲ್ ಗೋಲ್ಕೀಪರ್ ಪ್ರಶಸ್ತಿ ನೀಡಲು ಮುಂದಾಗಿರುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ನಿರ್ಧಾರವನ್ನು 70ಕ್ಕೂ ಅಧಿಕ ಹಳೆ ಮತ್ತು ಹಾಲಿ ವಿದ್ಯಾರ್ಥಿಗಳು ಖಂಡಿಸಿದ್ದಾರೆ.
ನರೇಂದ್ರ ಮೋದಿ ಸರಕಾರದಡಿಯಲ್ಲಿ ಅಲ್ಪಸಂಖ್ಯಾತರನ್ನು ಶಿಕ್ಷೆಗೊಳಪಡಿಸುವ ಧೋರಣೆಯನ್ನು ಅನಿಯಂತ್ರಿತವಾಗಿ ಪಾಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಧ್ವೇಷಾಪರಾಧಗಳು ಹೆಚ್ಚಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ ಮತ್ತು ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಪೌರತ್ವವಂಚಿತಗೊಳಿಸಿರುವುದು ಮೋದಿ ಸರಕಾರ ಇತ್ತೀಚೆಗೆ ಅಲ್ಪಸಂಖ್ಯಾತರ ಮೇಲೆ ನಡೆಸಿದ ದೌರ್ಜನ್ಯವಾಗಿದೆ ಎಂದು ಗೇಟ್ಸ್ ಕೇಂಬ್ರಿಡ್ಜ್ನ ವಿದ್ಯಾರ್ಥಿಗಳು ಪತ್ರದಲ್ಲಿ ತಿಳಿಸಿದ್ದಾರೆ.