ಕೇರಳದ ಎಡ ಸಂಘಟನೆಗಳಿಂದ ಪ್ರಧಾನಿಗೆ 1.5 ಲಕ್ಷ ಬಹಿರಂಗ ಪತ್ರಗಳ ರವಾನೆ
ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ
ತಿರುವನಂತಪುರ,ಅ.8: ಕೇರಳದಲ್ಲಿನ ಎಸ್ಎಫ್ಐ,ಡಿವೈಎಫ್ಐ ಹಾಗೂ ಸಿಪಿಎಮ್ನ ಯುವ ಸಂಘಟನೆಗಳ ಸದಸ್ಯರು 49 ಗಣ್ಯರು ಬರೆದಿದ್ದ ಬಹಿರಂಗ ಪತ್ರದ 1.5 ಲಕ್ಷ ಪ್ರತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ. ಈ ಗಣ್ಯರು ಕಳೆದ ಜುಲೈನಲ್ಲಿ ಗುಂಪುಹತ್ಯೆಗಳನ್ನು ಖಂಡಿಸಿ ಮೋದಿಯವರಿಗೆೆ ಈ ಬಹಿರಂಗ ಪತ್ರವನ್ನು ಬರೆದಿದ್ದರು.
49 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಈ ಸಂಘಟನೆಗಳ ಕಾರ್ಯಕರ್ತರು,ಈ ಪತ್ರದ ಪ್ರತಿಗಳನ್ನು ರವಾನಿಸಿರುವುದಕ್ಕಾಗಿ ತಮ್ಮ ವಿರುದ್ಧವೂ ದೇಶದ್ರೋಹ ಪ್ರಕರಣವನ್ನು ದಾಖಲಿಸುವಂತೆ ಮೋದಿ ಅವರಿಗೆ ಸವಾಲೊಡ್ಡಿದ್ದಾರೆ.
ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದ 49 ಗಣ್ಯರು ದೇಶದ್ರೋಹಿಗಳೆಂದು ಅವರು ಭಾವಿಸಿದ್ದರೆ,ಅದೇ ಪತ್ರವನ್ನು ರವಾನಿಸಿರುವ ನಮ್ಮ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಲಿ. ಈ ಹೋರಾಟದಲ್ಲಿ ಜೈಲು ಸೇರಲು ನಾವು ಸಿದ್ಧರಿದ್ದೇವೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಎ.ಎ.ರಹೀಂ ಹೇಳಿದರು.
ನಮ್ಮ ಬುದ್ಧಿಜೀವಿಗಳ ವಿರುದ್ಧ ದಾಖಲಾಗಿರುವ ಪ್ರಕರಣವು ನಮ್ಮ ಸಂವಿಧಾನ ಮತ್ತು ಅದರ ವೌಲ್ಯಗಳ ನಾಶಕ್ಕಾಗಿ ಬೃಹತ್ ಸಂಚಿನ ಭಾಗವಾಗಿದೆ ಎಂದ ಅವರು,ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕುಗಳನ್ನು ನಿರಾಕರಿಸುವ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಫ್ಯಾಸಿಸ್ಟ್ ನೀತಿಗಳ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸಲು ಹುನ್ನಾರ ನಡೆಸಿವೆ ಎಂದರು.