ಮದನಿ ಕಾಲೇಜಿನ ಎನ್ಎಸ್ಎಸ್ ಶಿಬಿರ ಸಮಾರೋಪ
ಉಳ್ಳಾಲ, ಅ. 9: ಉಳ್ಳಾಲ ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಶಿಬಿರದ ಸಮಾರೋಪವು ಇತ್ತೀಚೆಗೆ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಎನ್. ಇಸ್ಮಾಯಿಲ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವುದರಿಂದ ಹಿರಿಯರ ಬದುಕು, ಕಷ್ಟದಿಂದ ಕೂಡಿದ ಅಂದಿನ ಆ ದಿನಗಳು, ಆಗಿನ ಅನ್ಯೋನ್ಯತೆಗಳು ಕಣ್ಣಿನೆದುರಿಗೆ ಬಂದು ನಿಲ್ಲುತ್ತದೆ. ನಗರದ ಯಾಂತ್ರಿಕ ಜೀವನವು ಮಾನವ ಸಬಂಧಗಳನ್ನು ದೂರೀಕರಿಸುವ ಅಪಾಯವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮದನಿ ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಟಿ. ಜನ ಸಮುದಾಯದ ನಡುವೆ ಭಿನ್ನತೆ ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರೊಳಗಾಗಿ ಬಾಳಿ ಬದುಕಲು ಇಂತಹ ಶಿಬಿರಗಳು ಸಹಾಯಕಾರಿ ಎಂದರು.
ಸರಕಾರಿ ಪ್ರೌಢಶಾಲಾ ವಿಭಾಗದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ ಶುಭ ಹಾರೈಸಿದರು.
ಶಿಬಿರಾರ್ಥಿಗಳಾದ ಮುಹಮ್ಮದ್ ಮಿಕ್ದಾದ್, ಮುಕ್ತಾರ್ ಅಹ್ಮದ್ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್, ನರಿಂಗಾನ ಗ್ರಾಪಂ ಸದಸ್ಯರಾದ ಅಬ್ದುಲ್ ರಹಿಮಾನ್ ಬಹುಮಾನ ವಿತರಿಸಿದರು. ಡಾ.ಎನ್. ಇಸ್ಮಾಯಿಲ್ ಅವರನ್ನು ಎನ್ಎಸ್ಎಸ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪನ್ಯಾಸಕ ಅಬ್ಬಾಸ್ ಕಿನ್ಯ, ಬೋಧಕೇತರ ಸಿಬ್ಬಂದಿ ಶಂಕರ ಪಾಟಾಳಿ, ಎನ್ಎಸ್ಎಸ್ ಹಳೆ ವಿದ್ಯಾರ್ಥಿಗಳಾದ ಅಬ್ದುಲ್ ಅಝೀಝ್ ತಂಝೀಲ್, ಮುಹಮ್ಮದ್ ತುಫೈಲ,ಮುಹಮ್ಮದ್ ಸಿನಾನ್, ಮುಹಮ್ಮದ್ ಫರ್ಹಾನ್ ಉಪಸ್ಥಿತರಿದ್ದರು.
ಉಪನ್ಯಾಸಕ ಮುಹಮ್ಮದ್ ಫಾಝಿಲ್ ಸ್ವಾಗತಿಸಿದರು. ಶಿಬಿರಾಧಿಕಾರಿ ಹಬೀಬ್ ರಹ್ಮಾನ್ ವಂದಿಸಿದರು. ಶಿಬಿರದ ಉಪನಾಯಕ ಮುಹಮ್ಮದ್ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.