ಪಡುಬಿದ್ರೆಯಲ್ಲಿ ಗಣಪತಿ ವಿಸರ್ಜನೆ: ಬಜರಂಗದಳದ ಕಾರ್ಯಕರ್ತರ ಮಧ್ಯೆ ಹೊಡೆದಾಟ
ಪಡುಬಿದ್ರೆ: ಪಡುಬಿದ್ರೆಯಲ್ಲಿ ಮಂಗಳವಾರ ಬಾಲಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬಜರಂಗ ದಳದ ಎರಡು ತಂಡಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ.
ಪಡುಬಿದ್ರಿಯ ಬಾಲಗಣೇಶ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವಿಜಯದಶಮಿಯ ದಿನವಾದ ಮಂಗಳವಾರ ವಿಜ್ರಂಭಣೆಯಿಂದ ನಡೆಯಿತು. ಈ ವೇಳೆ ಬಜರಂಗದಳದ ಎರಡು ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದೆ.
ಮೆರವಣಿಗೆ ನಡೆದುಕೊಂಡು ಹೋಗುತ್ತಿರುವಾಗ ಪಡುಬಿದ್ರಿ ನಾರಾಯಣ ಗುರು ಮಂದಿರದ ಬಳಿ ತಲುಪಿದಾಗ ಆರೋಪಿಗಳಾದ ಹೇಮರಾಜ್, ದಿನೇಶ್, ಸ್ನೇಹಿತ್ ಕರ್ಕೆರಾ ಇವರು ಹೆಜಮಾಡಿಯ ಗುಂಡಿ ನಿವಾಸಿ ಕೃಷ್ಣಾ ಸಾಲ್ಯಾನ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಗ ಸ್ನೇಹಿತ್ ಕರ್ಕೆರಾ ಎಂಬಾತ ಕಲ್ಲನ್ನು ಎಸೆದು ಗಾಯಗೊಳಿಸಿದ್ದಾನೆ. ಅಲ್ಲದೆ ಇದೇ ವೇಳೆ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೊಂದೆಡೆ ಹೇಮರಾಜ್ ಎಂಬಾತನಿಗೆ ಕೃಷ್ಣ ಸಾಲ್ಯಾನ್, ಯೋಗೀಸ್ ಸಾಲ್ಯಾನ್, ಅಜಿತ್ ಶೆಟ್ಟಿ, ಸುಜಿತ್ ಶೆಟ್ಟಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.