ಪಿಎಫ್ಐ ಸುರತ್ಕಲ್ ವಲಯ: 'ಜನಾರೋಗ್ಯವೇ ರಾಷ್ಟ್ರ ಶಕ್ತಿ' ಅಭಿಯಾನ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ವಲಯದ ವತಿಯಿಂದ 'ಜನಾರೋಗ್ಯವೇ ರಾಷ್ಟ್ರ ಶಕ್ತಿ' ಎಂಬ 'ರಾಷ್ಟ್ರೀಯ ಆರೋಗ್ಯ ಆಂದೋಲನ' ಸುರತ್ಕಲ್ ಕರ್ನಾಟಕ ಸೇವಾ ವೃಂದ ಮುಂಭಾಗದಲ್ಲಿ ನಡೆಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ವಲಯಾಧ್ಯಕ್ಷ ಅಝೀಝ್ ಸುರತ್ಕಲ್ ಧ್ವಜವನ್ನು ಟೀಮ್ ಕ್ಯಾಪ್ಟನ್ ಶಫೀಕ್ ಕಾಟಿಪಳ್ಳರಿಗೆ ಹಸ್ತಾಂತರಿಸುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಲಾಯಿತು. ಸಂಜೆ 4.30 ಕ್ಕೆ ಮ್ಯಾರಥಾನ್ ನಡೆಯಿತು.
ಮುಖ್ಯ ಅತಿಥಿ ಹಾಗೂ ಭಾಷಣಕಾರರಾಗಿ ಆಗಮಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಎ.ಕೆ ಅಶ್ರಫ್ ಜೋಕಟ್ಟೆ ಮಾತನಾಡಿ ದೇಶದಲ್ಲಿ ಇತ್ತೀಚೆಗೆ ಬಂದಿರುವ ಕೆಲವು ಹೊಸ ಕಾನೂನುಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ವಿರುದ್ಧವಾಗಿದ್ದು ಜನರು ಕುಟುಂಬ ವ್ಯವಸ್ಥೆಯಿಂದ ದೂರಗೊಂಡು ನೆಮ್ಮದಿಯಿಲ್ಲದ ಅನಾರೋಗ್ಯ ಯುತವಾದ ಬದುಕನ್ನು ಬದುಕುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ಆರೋಗ್ಯವಂತ ಜನರಿದ್ದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಮತ್ತು ಉತ್ತಮ ಪರಿಸರವನ್ನೂ, ಉತ್ತಮ ರಾಷ್ಟ್ರ ವನ್ನೂ ಕಟ್ಟಬಹುದು, ಅಲ್ಲದೇ ಉತ್ತಮ ಆರೋಗ್ಯಯುತ ಬದುಕು ಪ್ರವಾದಿಯವರು ಕಲಿಸಿದ ಪವಿತ್ರ ಇಸ್ಲಾಮಿನ ಸಂದೇಶವಾಗಿದೆ. ಹಾಗಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರ ವ್ಯಾಪಿ ಈ ರಾಷ್ಟ್ರೀಯ ಆರೋಗ್ಯ ಆಂದೋಲನವನ್ನು ನಡೆಸುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ವಿಶೇಷತೆಯಾಗಿ ಕಾರ್ಯಕರ್ತರಿಂದ ಯೋಗ, ತಾಲೀಮು ಹಾಗೂ ಆತ್ಮರಕ್ಷಣಾ ಕಲೆ ಪ್ರದರ್ಶನ ನಡೆಯಿತು. ಇರ್ಫಾನ್ ಕಾನ ಕಾರ್ಯಕ್ರಮ ನಿರೂಪಿಸಿದರು.