ಸುಧೀರ್ ಚೌಧರಿ ವಿರುದ್ಧ ಮಹುವಾ ಮೊಯಿತ್ರ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ನೀಡಿದ್ದ ತಡೆಯಾಜ್ಞೆ ರದ್ದು
ಹೈಕೋರ್ಟ್ ಆದೇಶ
ಹೊಸದಿಲ್ಲಿ, ಅ.17: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ ಅವರು 'ಝೀ ನ್ಯೂಸ್' ಮುಖ್ಯ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿದ್ದ ಸೆಶನ್ಸ್ ನ್ಯಾಯಾಲಯದ ಆದೇಶವನ್ನು ದಿಲ್ಲಿ ಹೈಕೋರ್ಟಿನ ಜಸ್ಟಿಸ್ ಬೃಜೇಶ್ ಸೇಠಿ ನೇತೃತ್ವದ ಪೀಠ ರದ್ದುಗೊಳಿಸಿದೆ.
ಸೆಶನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸಂಸದೆ ದಿಲ್ಲಿ ಹೈಕೋರ್ಟಿನ ಮೆಟ್ಟಿಲೇರಿದ್ದರು.
ಜುಲೈ 25ರಂದು ಸಂಸದೆ ಮೊಯಿತ್ರ ಸಂಸತ್ತಿನಲ್ಲಿ ನೀಡಿದ ಭಾಷಣದಲ್ಲಿ ಫ್ಯಾಶಿಸಂನ ಏಳು ಗುಣಲಕ್ಷಣಗಳನ್ನು ಉಲ್ಲೇಖಿಸಿ ಅವುಗಳು ಹೇಗೆ ಭಾರತಕ್ಕೆ ಅನ್ವಯವಾಗುತ್ತದೆ ಎಂದು ವಿವರಿಸಿದ್ದರು. ಜುಲೈ 4ರಂದು ಸುಧೀರ್ ಚೌಧರಿ ತಮ್ಮ 'ಪ್ರೈಮ್ ಟೈಮ್ ಶೋ'ನಲ್ಲಿ ಮೊಯಿತ್ರ ಅವರ ಭಾಷಣವು ವಾಷಿಂಗ್ಟನ್ ಮಂತ್ಲಿಯಲ್ಲಿ ಜನವರಿ 2017ರಲ್ಲಿ ಪ್ರಕಟವಾದ ಲೇಖನದ ಕೃತಿಚೌರ್ಯ ಎಂದು ಆರೋಪಿಸಿದ್ದರು.
ಚೌಧರಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮೊಯಿತ್ರ ತಾವು ತಮ್ಮ ಮಾಹಿತಿಯ ಮೂಲವನ್ನು ಸ್ಪಷ್ಟವಾಗಿ ತಿಳಿಸಿದ್ದಾಗಿ ಹೇಳಿದ್ದಾರೆ. ಲೇಖಕ ಮಾರ್ಟಿನ್ ಕೂಡ ಮೊಯಿತ್ರ ಅವರ ವಿರುದ್ಧ ಕೃತಿಚೌರ್ಯದ ಸುಳ್ಳು ಆರೋಪ ಹೊರಿಸಲಾಗಿದೆ ಎಂದಿದ್ದರು.