ರಸ್ತೆ ಬದಿ ಟ್ರ್ಯಾಕ್ಟರ್ ನಿಲ್ಲಿಸಿ ಬೈಕ್ ಸವಾರರಿಬ್ಬರ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಶಿಕ್ಷೆ
ಶಿವಮೊಗ್ಗ, ಅ. 17: ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಟ್ರ್ಯಾಕ್ಟರ್ ಚಾಲಕನಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ 3 ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶ ಹೆಚ್.ಸಿ.ಸತೀಶ್ರವರು ತೀರ್ಪು ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕಿನ ಮುಸೇನಾಳ್ ಗ್ರಾಮದ ಶ್ರೀನಿವಾಸ ನಾಯ್ಕ್ (28) ಶಿಕ್ಷೆಗೊಳಗಾದ ಟ್ರ್ಯಾಕ್ಟರ್ ಚಾಲಕ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪಿ. ವೀಣಾರವರು ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಶಿವಮೊಗ್ಗ ತಾಲೂಕಿನ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡದ ಹರಕೆರೆ ಗ್ರಾಮದ ಎನ್.ಹೆಚ್. 206 ರಲ್ಲಿ ಅಡಕೆ ಮರದ ತುಂಡುಗಳನ್ನು ಸಾಗಾಣೆ ಮಾಡುತ್ತಿದ್ದ ಟ್ರ್ಯಾಕ್ಟರನ್ನು ಶ್ರೀನಿವಾಸ ನಾಯ್ಕ್ ನಿಲ್ಲಿಸಿದ್ದರು.
ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿಯಾಗಿ ರಾಮನಗರದ ನಾಗೇಂದ್ರ ಹಾಗೂ ಗಜೇಂದ್ರ ಎಂಬವರು ಮೃತಪಟ್ಟಿದ್ದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಬದಿ ಯಾವುದೇ ಸೂಚನೆ ನೀಡದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಾಲಕನ ವಿರುದ್ದ ಪ್ರಕರಣ ದಾಖಲಾಗಿತ್ತು.