ಹಾಸನ: ಖೋಟಾ ನೋಟು ದಂಧೆ; ಆರೋಪಿಗಳ ಬಂದನ
ಹಾಸನ: ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ಗ್ರಾಮಾಂತರ ಠಾಣೆಯ ಪೋಲಿಸರು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿ ಗ್ರಾಮದ ಇಲಿಯಾಸ್, ಸುಲೈಮಾನ್, ಕೆ.ಆರ್ ನಗರ ತಾಲೂಕು ಬೆಟ್ಟಗಾನಹಳ್ಳಿ ಕಿರಣ್ ಹಾಗೂ ಹನುಮನಹಳ್ಳಿ ಸಂತೋಷ್ ಬಂಧಿತ ಆರೋಪಿಗಳು.
ಮಾರುತಿ ಓಮ್ನಿಯಲ್ಲಿ ಮಂಗಳೂರಿಗೆ ತೆರಳುವ ವೇಳೆ ತಾಲೂಕಿನ ಮಾರನಹಳ್ಳಿ ಗ್ರಾಮದ ಹೊರ ಠಾಣೆಯ ಸಮೀಪ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಗ್ರಾಮಾಂತರ ಠಾಣೆ ಪೋಲಿಸರಿಗೆ ವಾಹನದ ದಾಖಲೆ ನೀಡಲು ಹಿಂದೇಟು ಹಾಕಿದ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದರು.
ಇದರಿಂದ ಅನುಮಾನಗೊಂಡ ಪೋಲಿಸರು ವಾಹನ ತಪಾಸಣೆ ಮಾಡಿದಾಗ ಡ್ಯಾಷ್ ಬೋರ್ಡ್ನಲ್ಲಿ ಒಂದೇ ಕ್ರಮ ಸಂಖ್ಯೆಯ 500 ರೂ.ಗಳ 3 ನೋಟುಗಳು ಪತ್ತೆಯಾಗಿದವು.
ಬೆನ್ನತ್ತಿ ಆರೋಪಿಗಳನ್ನು ಹಿಡಿದು ತಪಾಸಣೆಗೊಳಪಡಿಸಿದಾಗ ಅವರ ಬಳಿ 2000 ಮುಖ ಬೆಲೆಯ 2 ಹಾಗು 100 ಮುಖ ಬೆಲೆಯ 15 ಖೋಟಾ ನೋಟುಗಳಿದ್ದವು. ಒಟ್ಟು 13 ಸಾವಿರ ರೂ. ಮುಖಬೆಲೆಯ ನಕಲಿ ನೋಟು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮೊದಲು ಆರೋಪಿಗಳು ದೋಣಿಗಾಲ್ ಗ್ರಾಮ ಸಮೀಪದ ಅಂಗಡಿಯೊಂದರಲ್ಲಿ 2000 ರೂ.ನ ಖೋಟಾ ನೋಟು ನೀಡಿ ಸೀಗರೇಟ್ ಖರೀದಿಸಿದ್ದು, ಮಾರನಹಳ್ಳಿ ಹೋಟೆಲ್ ಒಂದರಲ್ಲಿ ಊಟ ಮಾಡಿ 2000 ಖೋಟಾ ನೋಟು ನೀಡಿ ಚಿಲ್ಲರೆ ಪಡೆದಿದ್ದರು ಎನ್ನುವ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.
ಅರೋಪಿ ಕಿರಣ್ ಮನೆಯ ಮೇಲೆ ದಾಳಿ ಮಾಡಿ ನೋಟು ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.