ಬೆಂಗಳೂರು: ಮದ್ರಸಾ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕ್ರೀಡಾಕೂಟ
ಬೆಂಗಳೂರು, ಅ.17: ಮದ್ರಸಾ ವಿದ್ಯಾರ್ಥಿಗಳಿಗಾಗಿ ಇದೇ ಮೊದಲ ಬಾರಿಗೆ ಅ.19 ಹಾಗೂ 20ರಂದು ಮಾಮೂರ್ ಸ್ಪೋರ್ಟ್ಸ್ ಸಂಘಟನೆ ವತಿಯಿಂದ ಕೋರಮಂಗಲದ 5ನೇ ಬ್ಲಾಕ್ನಲ್ಲಿರುವ ಕಲ್ಯಾಣ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಬ್ ಜೂನಿಯರ್ಸ್(5-9 ವರ್ಷ), ಜೂನಿಯರ್ಸ್ (10-13ವರ್ಷ), ಸೀನಿಯರ್ಸ್(14-18) ಹಾಗೂ ಸೂಪರ್ ಸೀನಿಯರ್ಸ್(19-25 ವರ್ಷ) ಎಂದು 5 ರಿಂದ 25 ವರ್ಷ ವಯೋಮಾನದ ವಿದ್ಯಾರ್ಥಿಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರಿನ ಆಯ್ದ 5 ಮದ್ರಸಾಗಳ ಸುಮಾರು 250 ಮಕ್ಕಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಕ್ಕಳಿಗೆ ಹಾಗೂ ಮದ್ರಸಾ ಶಿಕ್ಷಕರಿಗೆ ಕ್ರೀಡಾ ಜೆರ್ಸಿ, ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು. ಮದ್ರಸಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಅಗತ್ಯವನ್ನು ಮನಗಂಡು ಈ ವಿನೂತನ ಪ್ರಯೋಗವನ್ನು ಆರಂಭಿಸುತ್ತಿರುವುದಾಗಿ ಕ್ರೀಡಾಕೂಟದ ಆಯೋಜಕರ ಪ್ರತಿನಿಧಿ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.
ಕೋರಮಂಗಲ ಡಿಸಿಪಿ ಇಶಾ ಪಂತ್ ಕ್ರೀಡಾಕೂಟಕ್ಕೆ ಅ.19ರಂದು ಬೆಳಗ್ಗೆ 8 ಗಂಟೆಗೆ ಚಾಲನೆ ನೀಡಲಿದ್ದಾರೆ. ಅ.20ರಂದು ಸಂಜೆ 5.15 ರಿಂದ 8 ಗಂಟೆಯವರೆಗೆ ಮಸ್ಜಿದೆ ಮಾಮೂರ್ನಲ್ಲಿ ಬಹುಮಾನಗಳ ವಿತರಣಾ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಆನೇಪಾಳ್ಯದ ಜಾಮಿಯಾ ಇಸ್ಲಾಮಿಯಾ ಖಾಸಿಫ್ ಉಲ್ ಉಲೂಮ್, ನೀಲಸಂದ್ರದ ಮದೀನತುಲ್ ಉಲೂಮ್, ಪರಂಗಿಪಾಳ್ಯದ ಮದ್ರಸಾ-ಎ-ಹುಸೇನಿಯಾ ತಾಲಿಮ್ ಉಲ್ ಕುರ್ಆನ್, ದಾರುಲ್ ಉಲೂಮ್ ರಿಯಾಝುಲ್ ಜನ್ನಾ ಹಾಗೂ ಬೆಳ್ಳಂದೂರಿನ ಮದ್ರಸಾ-ಎ-ಖಾಸಿಮ್-ಉಲ್ ಉಲೂಮ್ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಈ ವೇಳೆ ಆಯೋಜಕರ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.