ಭಟ್ಕಳ: ತಂಡದಿಂದ ಯುವಕನ ಹತ್ಯೆ
ಓರ್ವ ಪೊಲೀಸ್ ವಶಕ್ಕೆ ? ನಾಲ್ವರು ಪರಾರಿ
ಭಟ್ಕಳ: ಶಾನುಭಾಗ್ ನಗರದ ಲಾಡ್ಜ್ ಒಂದರಲ್ಲಿ ಐವರ ತಂಡವೊಂದು ಯುವಕನನ್ನು ಕೊಲೆಗೈದಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು ಈ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಾಲ್ವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಯಾಗಿರುವ ಯುವಕನನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗ್ಲಿಹೊಂಡ ನಿವಾಸಿ ಅಫ್ಫಾನ್ ಜಬಾಲಿ ಬಿನ್ ನವರಂಗ್ ಮುಹಮ್ಮದ್ ಅಲಿ (25) ಎಂದು ಗುರುತಿಸಲಾಗಿದೆ.
ಮೃತ ಯುವಕನ ಸಹೋದರ ನೀಡಿದ ಮಾಹಿತಿಯಂತೆ, ಶನಿವಾರ ರಾತ್ರಿ 9.30 ಸುಮಾರು ತನ್ನ ಸಹೋದರ ಅಪ್ಫಾನ್ನಿಂದ ತನ್ನ ಮೊಬೈಲ್ಗೆ ಕರೆ ಬಂದಿದ್ದು, ನನಗೆ ಲಾಡ್ಜ್ ನಲ್ಲಿ ಕೂಡಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದ. ನಾನು ಲಾಡ್ಜಿಗೆ ತಲುವಷ್ಟರಲ್ಲಿ ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದು ಕೊಂಡಿದ್ದ ಮತ್ತು ನನ್ನನ್ನು ನೋಡಿದ ತಕ್ಷಣ ನಾಲ್ವರು ಪರಾರಿಯಾದರು, ಇನ್ನೋರ್ವ ಅಲ್ಲೆ ಸಮೀಪ ಅಡಗಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ: ಯುವಕನ ಕೊಲೆ ಯಾವ ಕಾರಣಕ್ಕೆ ನಡೆಯಿತು? ಹಣ ವ್ಯವಹಾರವೇನಾದರೂ ಇದರಲ್ಲಿ ಕೆಲಸ ಮಾಡಿರಬಹುದೇ ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರ ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ.