ಪುತ್ತೂರು: ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಪುತ್ತೂರು: ಕಲಿಕೆಯಲ್ಲಿ ಹಿಂದುಳಿದಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಎದುರಿಸುವ ಭಯದಿಂದ ಸೋಮವಾರ ಮುಂಜಾನೆ ತಮ್ಮ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೇರಿ ಎಂಬಲ್ಲಿ ನಡೆದಿದೆ.
ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ,ಒಳಮೊಗ್ರು ಗ್ರಾಮದ ಕೇರಿ ನಿವಾಸಿ ವಿಠಲ ರೈ ಎಂಬವರ ಪುತ್ರಿ ವೀಣಾ (18) ಆತ್ಮಹತ್ಯೆ ಮಾಡಿಕೊಂಡವರು.
ಪಿಯುಸಿ ವಿಭಾಗದ ಪರೀಕ್ಷೆಗಳು ಆರಂಭಗೊಂಡಿದ್ದು,ವಿದ್ಯಾರ್ಥಿನಿಯಾಗಿರುವ ವೀಣಾ ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ ಎದ್ದು ಓದಲು ಆರಂಭಿಸಿದ್ದಳು. ಮುಂಜಾನೆ 6 ಗಂಟೆಯ ವೇಳೆಗೆ ತಂದೆ ವಿಠಲ ರೈ ಅವರು ಕೆಲಸಕ್ಕೆ ಹೊರಡುವ ವೇಳೆ ಪುತ್ರಿ ವೀಣಾ ಕಾಣೆಯಾಗಿದ್ದರು. ಆಕೆಗಾಗಿ ಹುಡುಕಾಟ ನಡೆಸಿದ ವೇಳೆ ಆಕೆಯ ಕಿವಿಯಲ್ಲಿದ್ದ ಚಿನ್ನದ ಆಭರಣಗಳು ಆಕೆ ಮಲಗಿದ ಚಾಪೆಯಲ್ಲಿ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಅನುಮಾನಗೊಂಡು ಮನೆಮಂದಿ ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ ವೇಳೆ ಮನೆಯ ಎದುರು ಭಾಗದಲ್ಲಿರುವ ತೋಟದ ಕೆರೆಯಲ್ಲಿ ವೀಣಾ ಮೃತದೇಹ ಪತ್ತೆಯಾಗಿತ್ತು.
ಕಲಿಕಾ ಭಯವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.