ಎನ್ಆರ್ಸಿಯಿಂದ ಕೈಬಿಟ್ಟ ಕಾರಣ ನವೆಂಬರ್ನಲ್ಲಿ ಸ್ಪಷ್ವವಾಗಲಿದೆ: ಅಧಿಕಾರಿಗಳ ಹೇಳಿಕೆ
ಗುವಾಹಟಿ, ಅ.21: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಯಿಂದ ಹೊರಗುಳಿದವರಿಗೆ ಮುಂದಿನ ತಿಂಗಳು ಕಾರಣ ತಿಳಿಸಲಾಗುವುದು. ಆ ಬಳಿಕ ಅವರು ರಾಜ್ಯದಲ್ಲಿರುವ ವಿದೇಶಿಯರ ನ್ಯಾಯಮಂಡಳಿಯೆದುರು ಅರ್ಜಿ ಸಲ್ಲಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್ಆರ್ಸಿಯಿಂದ ಕೈಬಿಡಲು ಏನು ಕಾರಣ ಎಂಬ ಮಾಹಿತಿಯನ್ನು ರಿಜಿಸ್ಟರ್ಡ್ ಪತ್ರದ ಮೂಲಕ ಮನೆಗೆ ಕಳುಹಿಸಲಾಗುವುದು. ನವೆಂಬರ್ನಲ್ಲಿ ಈ ಪ್ರಕ್ರಿಯೆ ಅಂತ್ಯಗೊಳ್ಳಲಿದ್ದು ಬಳಿಕ ವಿದೇಶಿಯರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಪೌರತ್ವದ ಹಕ್ಕು ಸಾಧಿಸಬಯಸುವವರು ಅರ್ಜಿಯೊಂದಿಗೆ ಪೂರಕ ದಾಖಲೆ ಒದಗಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ.
ಎನ್ಆರ್ಸಿಯಿಂದ ತಿರಸ್ಕೃತಗೊಂಡ 120 ದಿನದೊಳಗೆ ಅರ್ಜಿ ಸಲ್ಲಿಸಬೇಕಿದೆ. ಆಗಸ್ಟ್ 31ರಂದು ಪ್ರಕಟವಾದ ಅಂತಿಮ ಎನ್ಆರ್ಸಿಯಲ್ಲಿ 31.12 ಮಿಲಿಯ ಜನರ ಹೆಸರಿದ್ದರೆ 1.9 ಮಿಲಿಯ ಜನರ ಹೆಸರು ಕೈಬಿಡಲಾಗಿದೆ. ಅಕ್ರಮ ವಲಸಿಗರನ್ನು ಗುರುತಿಸುವುದು ಎನ್ಆರ್ಸಿ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ.
Next Story