ಮೇಗಿನಪೇಟೆಯಲ್ಲಿ ಎಸ್ಡಿಪಿಐ ನೂತನ ಕಚೇರಿ ಉದ್ಘಾಟನೆ
ವಿಟ್ಲ, ಅ. 21: ಎಸ್ಡಿಪಿಐ ಪಕ್ಷದ ವಿಟ್ಲದ ನೂತನ ಕಚೇರಿ ವಿಟ್ಲದ ಮೇಗಿನಪೇಟೆಯಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಕೆ.ಎ, ಎಸ್ಡಿಪಿಐ ಸಮಾಜದ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ. ನಮ್ಮ ಪಕ್ಷಕ್ಕೆ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ದೇಶದ ಚರಿತ್ರೆಯನ್ನು ಬದಲಾಯಿಸುವ ಶಕ್ತಿ ಪಕ್ಷಕ್ಕಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದರು.
ಮೋದಿ ಸರಕಾರ ಮುಸ್ಲಿಮ್ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಇದರ ಬಗ್ಗೆ ಮುಸ್ಲಿಮರ ಮತದಿಂದ ಬೆಳೆದ ಕಾಂಗ್ರೆಸ್ ಪಕ್ಷ ಮಾತನಾಡುತ್ತಿಲ್ಲ. ಈ ಬಗ್ಗೆ ಧ್ವನಿ ಎತ್ತಿದ್ದು, ಎಸ್ಡಿಪಿಐ ಪಕ್ಷವಾಗಿದೆ. ನಮ್ಮ ಪಕ್ಷ ಕೋಮುವಾದಿ ಬಿಜೆಪಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿ ಹೋಗಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ದೇಶದ ನಾಗರಿಕರ ಪರ ಹೋರಾಟ ನಡೆಸುವ ಸೈನ್ಯ ನಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಎಸ್ಡಿಪಿಐ ಅಧಿಕಾರದ ಚುಕ್ಕಾಡಿ ಹಿಡಿಯಲಿದೆ ಎಂದರು.
ಎಸ್ಡಿಪಿಐ ವಿಟ್ಲ ವಲಯ ಅಧ್ಯಕ್ಷ ಅಬ್ದುಲ್ ರಹಿಮಾನ್ ವಿಟ್ಲ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಇಬ್ರಾಹಿಂ ಸಾಗರ, ಕಾರ್ಯದರ್ಶಿ ಹಮೀದ್ ಮೆಜೆಸ್ಟಿಕ್, ಅಶ್ರಫ್ ಬಾವು, ಪಿಎಫ್ಐ ವಿಟ್ಲ ವಲಯ ಅಧ್ಯಕ್ಷ ಕಮರುದ್ದೀನ್ ಪುಣಚ, ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಶಾಕೀರ್ ಅಳಕೆಮಜಲು, ಹಮೀದ್ ಎನ್.ಕೆ ಕಂಬಳಬೆಟ್ಟು, ನಝೀರ್ ಒಕ್ಕೆತ್ತೂರು, ಹಮೀದ್ ಮೇಗಿನಪೇಟೆ ಉಪಸ್ಥಿತರಿದ್ದರು.