ಕವಿ ರಾಜೇಂದ್ರ ಪ್ರಸಾದ್ಗೆ ನರಹಳ್ಳಿ ಪ್ರಶಸ್ತಿ
ಬೆಂಗಳೂರು, ಅ.23: ಕವಿ ರಾಜೇಂದ್ರ ಪ್ರಸಾದ್ 2019ನೇ ಸಾಲಿನ ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನ.17ರಂದು ರವಿವಾರ ಬೆಳಗ್ಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಇದುವರೆಗೂ ಏಳು ಕವನ ಸಂಕಲನ ಪ್ರಕಟಿಸಿರುವ ರಾಜೇಂದ್ರ ಪ್ರಸಾದ್, ಚಂದ್ರ ನೀರ ಹೂ, ಲಾವೋನ ಕನಸು, ಬ್ರೆಕ್ಟ್ ಪರಿಣಾಮ, ಕೋವಿ ಮತ್ತು ಕೊಳಲು, ಒಂದಿಷ್ಟು ಪ್ರೀತಿಗೆ ಕವನ ಸಂಕಲನ ಹಾಗೂ ಕೆಎಸ್ನ ಕವಿತೆಗಳ ಕುರಿತು ಹೂ ಬುಟ್ಟಿ ಹೆಸರಿನಲ್ಲಿ ಸಂಪಾದನಾ ಕೃತಿಗಳನ್ನು ಹೊರತಂದಿದ್ದಾರೆ.
ರಾಜೇಂದ್ರ ಪ್ರಸಾದ್ ಈಗಾಗಲೇ ಬೇಂದ್ರೆ ಗ್ರಂಥ ಬಹುಮಾನ, ಟೋಟೋ ಪುರಸ್ಕಾರ, ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದಿದ್ದಾರೆ. ಡಾ.ನರಹಳ್ಳಿ ಪ್ರತಿಷ್ಠಾನವು ಕಳೆದ ಆರು ವರ್ಷಗಳಿಂದ ಪ್ರತಿಭಾವಂತ ಯುವಲೇಖಕರಿಗೆ ನರಹಳ್ಳಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು 10ಸಾವಿರ ರೂ.ನಗದು ಹಾಗೂ ಫಲಕವನ್ನು ಹೊಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story